ಬೆಂಗಳೂರು: ‘ಪೆಟ್ರೋಲ್ ದರ ಏರಿಕೆ ಖಂಡಿಸಿ ರಾಜ್ಯದಲ್ಲಿ ಐದು ದಿನ 5 ಸಾವಿರ ಪೆಟ್ರೋಲ್ ಬಂಕ್ಗಳಲ್ಲಿ ‘100 ನಾಟೌಟ್’ ಅಭಿಯಾನ ಆರಂಭಿಸುತ್ತಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ಮೂಲಕ ಜನರ ಜೇಬು ಲೂಟಿ ಮಾಡುತ್ತಿದೆ. ಇದನ್ನು ಪ್ರತಿಭಟಿಸಿ ಇದೇ 11ರಿಂದ 15ರವರೆಗೆ ಅಭಿಯಾನ ಹಮ್ಮಿಕೊಳ್ಳುತ್ತೇವೆ’ ಎಂದರು.
‘11ರಂದು ಜಿಲ್ಲಾ ಕೇಂದ್ರ, 12ರಂದು ತಾಲ್ಲೂಕು ಕೇಂದ್ರ, 13ರಂದು ಜಿಲ್ಲಾ ಪಂಚಾಯಿತಿ ಹಾಗೂ ಹೋಬಳಿ, 14ರಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಟ್ರೋಲ್ ಬಂಕ್ಗಳಲ್ಲಿ, 15ರಂದು ಪ್ರಮುಖ ಪೆಟ್ರೋಲ್ ಬಂಕ್ಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಪಕ್ಷದ ಮುಂಚೂಣಿ ಘಟಕಗಳಾದ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎನ್ಎಸ್ಯುಐ, ರೈತ ಘಟಕ, ಹಿಂದುಳಿದ, ಅಲ್ಪಸಂಖ್ಯಾತ ಘಟಕ, ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಸದಸ್ಯರು ಬೆಳಿಗ್ಗೆ 11 ಗಂಟೆಯಿಂದ 12ರವರೆಗೂ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ’ ಎಂದರು.
‘ಕೊರೊನಾ ಭ್ರಷ್ಟಾಚಾರ ವಿಚಾರವಾಗಿ ಪಕ್ಷದ ನಾಯಕರು ಜಿಲ್ಲೆಗೆ ಹೋಗಿ ಪತ್ರಿಕಾಗೋಷ್ಠಿ ನಡೆಸಿದಂತೆ, ಪ್ರತಿಭಟನೆ ನೇತೃತ್ವಕ್ಕೂ ನಾಯಕರನ್ನು ನೇಮಿಸಲಾಗುವುದು. ಈ ಉಸ್ತುವಾರಿ ಹೊತ್ತಿರುವ ನಾಯಕರು ಜೂಮ್ ಮೂಲಕ ಪ್ರತಿಭಟನೆ ವೀಕ್ಷಿಸಬೇಕು. ಈ ಪ್ರತಿಭಟನೆಯ ಒಂದು ನಿಮಿಷದ ವಿಡಿಯೊ ಮಾಡಿ, ಪಕ್ಷದ ಐಟಿ ಸೆಲ್ ಹಾಗೂ ಸಾಮಾಜಿಕ ಜಾಲತಾಣ ವಿಭಾಗಕ್ಕೆ ಕಳುಹಿಸಬೇಕು. ಅದನ್ನು ಎಐಸಿಸಿಗೂ ಕಳುಹಿಸಲಾಗುವುದು’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.