ADVERTISEMENT

KPSC ಅಧ್ಯಕ್ಷ–ಸದಸ್ಯರ ನೇಮಕ ಪ್ರಶ್ನಿಸಿ ಪಿಐಎಲ್: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2023, 7:54 IST
Last Updated 13 ಏಪ್ರಿಲ್ 2023, 7:54 IST
   

ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಮತ್ತು 11 ಮಂದಿ ಸದಸ್ಯರ ನೇಮಕಾತಿ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ಸಲ್ಲಿಸಲಾಗಿರುವ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ನೇಮಿಸಲಾದ ಆದೇಶ ಪ್ರಶ್ನಿಸಿ ಶಶಿಪ್ರಸಾದ್ ಗಾಂಧಿ ಮತ್ತು 11 ಮಂದಿ ಸದಸ್ಯರ ನೇಮಕಾತಿ ಪ್ರಶ್ನಿಸಿ ಟಿ.ನರಸಿಂಹ ಮೂರ್ತಿ ಸಲ್ಲಿಸಿದ್ದ ಪಿಐಎಲ್‌ಗಳ ವಾದ-ಪ್ರತಿವಾದ ಆಲಿಕೆಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ಪೂರ್ಣಗೊಳಿಸಿತು.

‘ಹೋಟಾ ಸಮಿತಿ ಮಾರ್ಗಸೂಚಿಯಂತೆ ಶೋಧನಾ ಸಮಿತಿ ರಚಿಸದೆ ಮತ್ತು ಯಾವುದೇ ನಿಯಮ ರೂಪಿಸದೆ ರಾಜ್ಯ ಸರ್ಕಾರವು ಕೆಪಿಎಸ್‌ಎಸಿಗೆ ಸದಸ್ಯರನ್ನು ನೇಮಕ ಮಾಡಿದೆ. ಆದ್ದರಿಂದ, ಸದಸ್ಯರ ನೇಮಕಾತಿ ಆದೇಶ ರದ್ದುಪಡಿಸಬೇಕು ಮತ್ತು ಹೋಟಾ ಸಮಿತಿ ಅನುಸಾರ ಹೊಸದಾಗಿ ಸದಸ್ಯರನ್ನು ನೇಮಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂಬುದು ಅರ್ಜಿದಾರ ಟಿ.ನರಸಿಂಹ ಮೂರ್ತಿ ಕೋರಿಕೆ.

ADVERTISEMENT

2020ರ ಜೂನ್‌ 6ರಂದು ಮಾಡಲಾಗಿದ್ದ 11 ಮಂದಿ ಸದಸ್ಯರ ಈ ನೇಮಕಾತಿಯನ್ನು ಪ್ರಶ್ನಿಸಲಾಗಿದ್ದು, ಇವರಲ್ಲಿ ಡಾ.ಚಂದ್ರಕಾಂತ್ ಡಿ.ಶಿವಕೇರಿ, ಎಸ್.ಎಚ್. ದುಗ್ಗಪ್ಪ, ಡಾ.ಆರ್.ಲಕ್ಷ್ಮೀನಾರಾಯಣ ಮತ್ತು ಶ್ರೀಕಂಠರಾವ್ ನಿವೃತ್ತರಾಗಿದ್ದಾರೆ. ಸದಸ್ಯರಾಗಿದ್ದ ಶಿವಶಂಕರಪ್ಪ ಎಸ್.ಸಾಹುಕಾರ್ ಅಧ್ಯಕ್ಷರಾಗಿ 2021ರ ಏಪ್ರಿಲ್‌ 5ರಂದು ನೇಮಕಗೊಂಡಿದ್ದಾರೆ.

‘ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರ್ ಎಸ್.ಸಾಹುಕಾರ್ ಈ ಹಿಂದೆ ಸದಸ್ಯರಾಗಿದ್ದವರು. ಅವರನ್ನೇ 2021ರಲ್ಲಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಆದರೆ, ನೇಮಕಾತಿಯ ವೇಳೆ ಹೈಕೋರ್ಟ್ ಆದೇಶದಂತೆ ಯಾವುದೇ ನಿರ್ದಿಷ್ಟ ನಿಯಮವಾಗಲಿ ಅಥವಾ ಹೋಟಾ ಸಮಿತಿಯ ಮಾರ್ಗಸೂಚಿಯಾಗಲಿ ಪಾಲನೆಯಾಗಿಲ್ಲ. ಆದ್ದರಿಂದ, ಅವರ ನೇಮಕಾತಿ ರದ್ದುಪಡಿಸಬೇಕು’ ಎಂಬುದು ಮತ್ತೊಬ್ಬ ಅರ್ಜಿದಾರ ಶಶಿಪ್ರಸಾದ್ ಗಾಂಧಿ ಅವರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.