ADVERTISEMENT

ಪಿರಿಯಾಪಟ್ಟಣದ ಯುವಕ ಮಲೇಷ್ಯಾದಲ್ಲಿ ಸಾವು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 14:34 IST
Last Updated 19 ಡಿಸೆಂಬರ್ 2019, 14:34 IST
ಸುಮಂತ್
ಸುಮಂತ್   

ಪಿರಿಯಾಪಟ್ಟಣ: ಮಲೇಷ್ಯಾದಲ್ಲಿ ಉದ್ಯೋಗದಲ್ಲಿದ್ದ ಪಟ್ಟಣದ ಯುವಕ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಪಿರಿಯಾಪಟ್ಟಣದ ಶೋಭಾ ವೆಂಕಟೇಶ್ ದಂಪತಿ ಪುತ್ರ ಸುಮಂತ್ (22) ನೀರು ಪಾಲಾದ ಯುವಕ.

ಈತ ಮಲೇಷ್ಯಾ ಮೂಲದ ಖಾಸಗಿ ಕಂಪನಿಯ ಸರಕು ಸಾಗಣೆ ಹಡಗಿನಲ್ಲಿ 9 ತಿಂಗಳಿನಿಂದ ನೌಕರಿ ಮಾಡುತ್ತಿದ್ದ. ಬುಧವಾರ ಮಲೇಷ್ಯಾದಿಂದ ಕುಟುಂಬಕ್ಕೆ ಕರೆ ಬಂದಿದ್ದು, ನಿಮ್ಮ ಮಗ ನದಿಯೊಂದರಲ್ಲಿ ಮುಳುಗಿ ಮೃತಪಟ್ಟಿದ್ದು, ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಶವ ಪತ್ತೆಗಾಗಿ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ADVERTISEMENT

‘ಗುರುವಾರ ಯುವಕನ ಶವ ಪತ್ತೆಯಾಗಿದ್ದು, ಗುರುತು ಪತ್ತೆಗೆ ಈತನೊಂದಿಗೆ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ಸ್ನೇಹಿತರನ್ನು ಕರೆಸಿಕೊಂಡು ಮಲೇಷ್ಯಾ ಪೊಲೀಸರು ವಿಚಾರಣೆ ನಡೆಸಿದ್ದಾರೆ’ ಎಂದು ಪಿಎಸ್‌ಐ ಗಣೇಶ್‌ ತಿಳಿಸಿದರು.

ಸಂಸದ ಪ್ರತಾಪಸಿಂಹ ರಾಯಭಾರ ಕಚೇರಿ, ಇಮಿಗ್ರೇಷನ್ ವಿಭಾಗಕ್ಕೆ ಸುಮಂತ್ ಪೋಷಕರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

‘9 ತಿಂಗಳಿನಿಂದ ಸುಮಂತ್, ಸ್ಥಳೀಯ ಖಾತೆಗೆ ಸಂಬಳದ ಹಣವನ್ನು ಜಮಾ ಮಾಡುತ್ತಿದ್ದ. ಡಿ.25ರಂದು ಭಾರತಕ್ಕೆ ಮರಳಿ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ್ದ. ಈಗ ನೋಡಿದರೆ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದಿದೆ’ ಎಂದು ಪೋಷಕರು ರೋದಿಸಿದರು.

‘ನಾವು ಮಲೇಷ್ಯಾಕ್ಕೆ ತೆರಳುವಷ್ಟು ಆರ್ಥಿಕ ಚೈತನ್ಯ ಹೊಂದಿಲ್ಲ’ ಎಂದೂ ಅಸಹಾಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.