ಬಾಗೇಪಲ್ಲಿ: ಪಟ್ಟಣದ ಮುಖ್ಯರಸ್ತೆಯಲ್ಲಿನ ಸರ್ಕಾರಿ ಆಸ್ಪತ್ರೆಯ ಮುಂದೆ ಇರುವ ಪೊಲೀಸ್ ಚೌಕಿ ಶಿಥಿಲಾವ್ಯಸ್ಥೆಯಿಂದ ಮುರಿದಿದೆ. ಆದರೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪಟ್ಟಣದ ಮುಖ್ಯರಸ್ತೆಯಲ್ಲಿ ವಾಹನಗಳ ದಟ್ಟಣೆ ಉಂಟಾಗಿದೆ ಎಂದು ಪೊಲೀಸ್ ಇಲಾಖೆಯವರು ಡಾ.ಎಚ್.ಎನ್.ವೃತ್ತ, ಸರ್ಕಾರಿ ಆಸ್ಪತ್ರೆ ಹಾಗೂ ಸಾರಿಗೆ ಬಸ್ ನಿಲ್ದಾಣದ ಮುಂದೆ ಪೊಲೀಸ್ ಚೌಕಿಗಳು ಮಾಡಿದ್ದಾರೆ. ಆದರೆ ಸಂಚಾರ ನಿಯಂತ್ರಣ ಮಾಡುವ ಪೊಲೀಸ್ ಸಿಬ್ಬಂದಿ ಈ ಪೊಲೀಸ್ ಚೌಕಿಗಳಲ್ಲಿ ಕಾರ್ಯನಿರ್ವಹಿಸಿಲ್ಲ. ಪೊಲೀಸ್ ಚೌಕಿಗಳನ್ನು ನಿರ್ಮಿಸಿದರೂ ಸಂಚಾರ ನಿಯಂತ್ರಣ ಮಾಡಲು ಬಳಕೆ ಮಾಡಿಲ್ಲ. ಚೌಕಿಗಳ ಬಳಕೆ ಇಲ್ಲದಿರುವುದರಿಂದ ರಾಜಕೀಯ ಪಕ್ಷಗಳ ಮುಖಂಡರುಗಳ, ಶ್ರದ್ಧಾಂಜಲಿ ಫ್ಲೆಕ್ಸ್ಗಳು ಹಾಗೂ ಸಿನಿಮಾ ಪೋಸ್ಟರ್ಗಳನ್ನು ಅಂಟಿಸಲಾಗಿದೆ.
ಪಟ್ಟಣದ ಮುಖ್ಯರಸ್ತೆಯ ಸರ್ಕಾರಿ ಆಸ್ಪತ್ರೆಯ ಮುಂದೆ ಇರುವ ವೃತ್ತ ಬಸ್ ನಿಲ್ದಾಣಕ್ಕೆ, ಗೂಳೂರು ರಸ್ತೆ ಕಡೆಗೆ ಹಾಗೂ ಭಜನೆಮಂದಿರ-ಸಂತೇಮೈದಾನದ ರಸ್ತೆಗೆ ಸಂಪರ್ಕಿಸುತ್ತದೆ. ಪ್ರತಿನಿತ್ಯ ಮಹಿಳೆಯರು, ಮಕ್ಕಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಹಿರಿಯರು ಇದೇ ವೃತ್ತದಲ್ಲಿ ಸಂಚರಿಸುತ್ತಾರೆ. ಅತ್ಯಂತ ಜನನಿಬೀಡ ರಸ್ತೆಯಲ್ಲಿ ಈ ಪೊಲೀಸ್ ಚೌಕಿ ಇದೆ. ಕೂಡಲೇ ಜನರಹಿತದೃಷ್ಟಿಯಿಂದ ಪೊಲೀಸ್ ಅಧಿಕಾರಿಗಳು ಗಮನ ಹರಿಸಿ, ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಬೀಳುವ ಹಂತದಲ್ಲಿ ಇರುವ ಪೊಲೀಸ್ ಚೌಕಿಯನ್ನು ಸರಿಪಡಿಸಬೇಕು. ಅಥವಾ ಕೆಳಗೆ ಇಳಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
‘ಪಟ್ಟಣದಲ್ಲಿನ ಪೊಲೀಸ್ ಚೌಕಿಗಳು ಸುರಕ್ಷಿತವಾಗಿ ಚೌಕಿಗಳನ್ನು ನಿರ್ಮಿಸಬೇಕು. ಸಂಚಾರಕ್ಕೆ ಸಮರ್ಪಕವಾಗಿ ಬಳಕೆ ಆಗಬೇಕಾಗಿದೆ’ ಎಂದು ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಹಸಂಚಾಲಕ ಚನ್ನರಾಯಪ್ಪ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.