ADVERTISEMENT

ಪಾಕಿಸ್ತಾನ ಪರ ಸಂದೇಶ ಹಂಚಿಕೆ: ದಾವಣಗೆರೆ ಕಾನ್‌ಸ್ಟೆಬಲ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 11:14 IST
Last Updated 23 ಆಗಸ್ಟ್ 2020, 11:14 IST
ಸನಾವುಲ್ಲಾ
ಸನಾವುಲ್ಲಾ   

ದಾವಣಗೆರೆ: ‘ಪವರ್‌ ಆಫ್‌ ಪಾಕಿಸ್ತಾನ್‌’ ಎಂಬ ಸಂದೇಶವಿದ್ದ ಫೇಸ್‌ಬುಕ್‌ ಪೇಜ್‌ ಅನ್ನು ಲೈಕ್‌ ಮಾಡಿ, ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಅದನ್ನು ಶೇರ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಕಾನ್‌ಸ್ಟೆಬಲ್‌ ಸನಾವುಲ್ಲಾ ಅವರನ್ನು ಅಮಾನತುಗೊಳಿಸಲಾಗಿದೆ.

2008ನೇ ಸಾಲಿನಲ್ಲಿ ಕಾನ್‌ಸ್ಟೆಬಲ್‌ ಹುದ್ದೆಗೆ ಆಯ್ಕೆಯಾಗಿದ್ದ ಸನಾವುಲ್ಲಾ, ಈ ಮೊದಲು ಬಸವನಗರ ಪೊಲೀಸ್‌ ಠಾಣೆಯ ವಾಹನ ಚಾಲಕರಾಗಿದ್ದರು. 2014ರಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ಅನ್ಯ ಕೋಮಿನಹುಡುಗನ ಜೊತೆಗೆ ಓಡಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಸನಾವುಲ್ಲಾ ಹಾಗೂ ಅವರ ಸ್ನೇಹಿತರು ಹುಡುಗನ ಮೇಲೆ ಹಲ್ಲೆ ಮಾಡಿದ್ದರು. ಆಗಲೂ ಅವರನ್ನು ಅಮಾನತುಗೊಳಿಸಲಾಗಿತ್ತು. ಸನಾವುಲ್ಲಾ ಸದ್ಯ ವಿನೋಬನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಪಾಕಿಸ್ತಾನ ಪರ ಸಂದೇಶವನ್ನು ಹಂಚಿಕೊಂಡ ಪ್ರಕರಣ ವಿವಾದ ಪಡೆಯುತ್ತಿದ್ದಂತೆ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಈ ಹಿಂದೆ ಹುಡುಗ–ಹುಡುಗಿ ಜೊತೆಯಲ್ಲಿ ಓಡಾಡುತ್ತಿದ್ದ ವಿಚಾರಕ್ಕೆ ಗಲಾಟೆ ಮಾಡಿದ್ದಾಗಲೂ ಸನಾವುಲ್ಲಾನನ್ನು ಅಮಾನತುಗೊಳಿಸಲಾಗಿತ್ತು. ಈಗ ಪಾಕಿಸ್ತಾನ ಪರ ಸಂದೇಶವನ್ನು ಶೇರ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.