ವರ್ಗಾವಣೆ
ಬಾಗಲಕೋಟೆ: ಬಾದಾಮಿಯಲ್ಲಿ ಈಚೆಗೆ ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿಯವರಿಗೆ ಸಮವಸ್ತ್ರ ಧರಿಸಿಕೊಂಡೇ ಕಾಲಿಗೆ ಬಿದ್ದು, ಆಶೀರ್ವಾದ ಪಡೆದ 6 ಮಂದಿ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಮಾಡಿದ್ದಾರೆ.
ಆಶೀರ್ವಾದ ರೂಪದಲ್ಲಿ ಸ್ವಾಮೀಜಿಯಿಂದ ಪೊಲೀಸರು ಹಣ ಪಡೆದ ಮತ್ತು ಸ್ವಾಮೀಜಿ ಏಕವಚನದಲ್ಲೇ ಮಾತನಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ, ವರ್ಗಾವಣೆ ಆದೇಶ ಪತ್ರದಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
‘ಸಮವಸ್ತ್ರದಲ್ಲಿದ್ದಾಗ ಕಾಲಿಗೆ ಬಿದ್ದು ನಮಸ್ಕರಿಸಬಾರದು. ಸಲ್ಯೂಟ್ ಹೊಡೆಯಿರಿ ಸಾಕು. ಆಶೀರ್ವಾದ ರೂಪದಲ್ಲಿ ನೀಡಿದ ಹಣ ಖರ್ಚು ಮಾಡಬೇಡಿ. ಜಗಲಿ ಮೇಲಿಟ್ಟು ಪೂಜೆ ಮಾಡಿ. ಒಳ್ಳೆಯದಾಗುತ್ತದೆ’ ಎಂದು ಸ್ವಾಮೀಜಿ ಹೇಳಿದ್ದು ವಿಡಿಯೊದಲ್ಲಿದೆ.
ಬಾದಾಮಿ ಪೊಲೀಸ್ ಠಾಣೆಯ ಎಎಸ್ಐ ಜಿ.ಬಿ. ದಳವಾಯಿ, ಎಎಸ್ಐ ಡಿ.ಜೆ. ಶಿವಪುರ, ಕಾನ್ಸ್ಟೆಬಲ್ಗಳಾದ ಎಸ್.ಪಿ. ಅಂಕೋಲೆ, ಜಿ.ಬಿ. ಅಂಗಡಿ, ರಮೇಶ ಇಳಗೇರ, ಎಂ.ಎಸ್. ಹುಲ್ಲೂರ ವರ್ಗಾವಣೆಯಾದ ಸಿಬ್ಬಂದಿ.
‘ಮಠಕ್ಕೆ ಬರುವ ಭಕ್ತರಿಗೆ ಹಲವು ವರ್ಷಗಳಿಂದ ₹100 ರಿಂದ ₹500ರವರೆಗೆ ನೀಡಿ ಆಶೀರ್ವಾದಿಸುತ್ತೇನೆ. ಭಕ್ತರನ್ನು ಏಕವಚನದಲ್ಲೇ ಮಾತನಾಡಿಸುತ್ತೇನೆ. ಆಶೀರ್ವಾದ ರೂಪದಲ್ಲಿ ಹಣ ನೀಡಿದ್ದೇನೆ’ ಎಂದು ಶಿವಕುಮಾರ ಸ್ವಾಮೀಜಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.