ADVERTISEMENT

ರಂಗೇರಿದ ಉಪಚುನಾವಣೆ ಕಣ: ಉಗ್ರಪ್ಪ, ಶಾಂತಾ ನಾಮಪತ್ರ

ರಂಗೇರಿದ ಉಪಚುನಾವಣೆ ಕಣ: ಪಕ್ಷೇತರರಾಗಿ ಮೊಳಕಾಲ್ಮೂರು ತಿಪ್ಪೇಸ್ವಾಮಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 18:51 IST
Last Updated 16 ಅಕ್ಟೋಬರ್ 2018, 18:51 IST
ಬಿಜೆಪಿಯ ಜೆ.ಶಾಂತಾ ಅವರು ನಾಮಪತ್ರ ಸಲ್ಲಿಸುವ ಮುನ್ನ ನಡೆದ ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.
ಬಿಜೆಪಿಯ ಜೆ.ಶಾಂತಾ ಅವರು ನಾಮಪತ್ರ ಸಲ್ಲಿಸುವ ಮುನ್ನ ನಡೆದ ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.   

ಬಳ್ಳಾರಿ: ಲೋಕಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ಕಾಂಗ್ರೆಸ್‌ ಅಭ್ಯರ್ಥಿಯಾಗಿ ವಿ.ಎಸ್‌.ಉಗ್ರಪ್ಪ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಜೆ.ಶಾಂತಾ ಅದ್ಧೂರಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು.

ಅವರೊಂದಿಗೆ, ಅಚ್ಚರಿಯ ಬೆಳವಣಿಗೆಯಲ್ಲಿ, ಮೊಳಕಾlಲ್ಮುರು ಮಾಜಿ ಶಾಸಕ ತಿಪ್ಪೇಸ್ವಾಮಿ ಕೂಡ ಸದ್ದಿಲ್ಲದೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು. ಒಟ್ಟು ನಾಲ್ವರು ನಾಮಪತ್ರ ಸಲ್ಲಿಸಿದಂತಾಗಿದೆ.

ಕಾಂಗ್ರೆಸ್‌: ನಗರದ ಕನಕದುರ್ಗಮ್ಮ ಗುಡಿಯಲ್ಲಿ ಬೆಳಿಗ್ಗೆ ಪೂಜೆ ಸಲ್ಲಿಸಿದ ಉಗ್ರಪ್ಪ ನಂತರ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಲ್ಕು ನಾಮಪತ್ರ ಸಲ್ಲಿಸಿದರು.

ADVERTISEMENT

ಮೊದಲ ಬಾರಿಗೆ ನಾಮಪತ್ರ ಸಲ್ಲಿಸುವಾಗ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ಶಾಸಕರಾದ ಎಲ್‌ಬಿಪಿ ಭೀಮಾನಾಯ್ಕ, ಪಿ.ಟಿ.ಪರಮೇಶ್ವರ ನಾಯ್ಕ ಇದ್ದರು. ಎರಡನೇ ಬಾರಿ ಅಲ್ಲಂ ವೀರಭದ್ರಪ್ಪ, ಬಿ.ನಾಗೇಂದ್ರ ಜೊತೆಯಾದರು. ಮೂರನೇ ಬಾರಿಗೆ ಶಾಸಕರಾದ ಈ.ತುಕಾರಾಂ ಹಾಗೂ ಜೆ.ಎನ್‌.ಗಣೇಶ್‌, ನಾಲ್ಕನೇ ಬಾರಿಗೆ ರಾಜ್ಯಭಾ ಸದಸ್ಯ ಹಾಗೂ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿ.ವೆಂಕಟೇಶ ಪ್ರಸಾದ್‌ ಜೊತೆಯಾದರು.

ಬಿಜೆಪಿ: ಬಿಜೆಪಿ ಅಭ್ಯರ್ಥಿ ಶಾಂತಾ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಿಯಮ ಮೀರಿ ಮುಖಂಡರ ದಂಡೇ ನೆರೆದಿದ್ದು ಜಿಲ್ಲಾ ಚುನಾವಣಾಧಿಕಾರಿಯ ಅಸಮಾಧಾನಕ್ಕೂ ಕಾರಣವಾಯಿತು.

ವಕೀಲ ಪಟೇಲ್‌ ಸಿದ್ದಾರೆಡ್ಡಿ, ಮುಖಂಡರಾದ ಎಸ್‌.ಗುರುಲಿಂಗನಗೌಡ, ಎಸ್‌ಜೆವಿ ಮಹಿಪಾಲ್‌ ಮತ್ತು ನೇಮರಾಜ ನಾಯ್ಕ ಇದ್ದರು. ನಂತರ ಶಾಂತಾ ಸಹೋದರ ಬಿ.ಶ್ರೀರಾಮುಲು ಅವರೊಂದಿಗೆ ಮುಖಂಡ ಟಿ.ಎಚ್‌.ಸುರೇಶ್‌ಬಾಬು ಬಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ನಂತರ ಬಂದ ಶಾಸಕ ಜಿ.ಸೋಮಶೇಖರ ರೆಡ್ಡಿ ಶಾಂತಾ ಅವರೊಂದಿಗೆ ತಾವೂ ನಿಲ್ಲುವುದಾಗಿ ಹೇಳಿದರು. ಆದರೆ ಚುನಾವಣಾಧಿಕಾರಿ ನಿರಾಕರಿಸಿ ಹೊರಕ್ಕೆ ಕಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.