ಬೆಂಗಳೂರು: ಕೋವಿಡ್–19 ನಿರ್ವಹಣೆಯಲ್ಲಿ ಗೊಂದಲ ಹೆಚ್ಚಾಗುತ್ತಿರುವುದರಿಂದ ಆರೋಗ್ಯ ಖಾತೆಯನ್ನು ಬಿ.ಶ್ರೀರಾಮುಲು ಅವರಿಂದ ಹಿಂದಕ್ಕೆ ಪಡೆದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ನೀಡುವ ಸಾಧ್ಯತೆ ಇದೆ.
ಶ್ರೀರಾಮುಲು ಅವರಿಗೆ ಹಿಂದುಳಿದ ವರ್ಗಗಳ ಖಾತೆಯ ಜತೆಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ. ಖಾತೆ ಬದಲಾವಣೆಯ ಆದೇಶ ಯಾವುದೇ ಕ್ಷಣದಲ್ಲಾದರೂ ಹೊರಬೀಳಬಹುದು ಎಂದು ಮೂಲಗಳು ತಿಳಿಸಿವೆ.
ಕೋವಿಡ್ ಅನ್ನು ಈಗ ಇಬ್ಬರು ಸಚಿವರು ನಿರ್ವಹಿಸುತ್ತಿದ್ದು, ಪರಸ್ಪರ ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ಸರ್ಕಾರದ ನಿರ್ಧಾರಗಳಲ್ಲೂ ವ್ಯತ್ಯಾಸ ಆಗುತ್ತಿದ್ದು, ಕೋವಿಡ್ ನಿಯಂತ್ರಣ ಆಗದಿರುವುದು ಮುಖ್ಯಮಂತ್ರಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕೋವಿಡ್ ಬಗ್ಗೆ ವೈಜ್ಞಾನಿಕ ಮಾಹಿತಿಯ ಜತೆಗೆ ವೈದ್ಯರು ಮತ್ತು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸುವ ಸಾಮರ್ಥ್ಯ ಇದ್ದರಷ್ಟೇ, ಅದರ ನಿರ್ವಹಣೆ ಸುಗಮವಾಗಬಲ್ಲದು ಎಂಬ ಕಾರಣಕ್ಕೆ ಈ ಬದಲಾವಣೆ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಭಾನುವಾರ ಬೆಳಿಗ್ಗೆ ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆದ ಕೋವಿಡ್ ಕುರಿತ ಸಭೆಗೆ ಸುಧಾಕರ್ ಅವರಿಗೆ ಮಾತ್ರ ಆಹ್ವಾನವಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.