ADVERTISEMENT

ಮಂಜುನಾಥನಗರ: ತಂತಿ ತಗುಲಿ ಕಾರ್ಮಿಕನಿಗೆ ಗಾಯ

ಕಟ್ಟಡದ ಮೇಲೆ ಹೈ– ಟೆನ್ಷನ್ ವೈರ್: ಮಂಜುನಾಥನಗರದಲ್ಲಿ ಅವಘಡ

​ಪ್ರಜಾವಾಣಿ ವಾರ್ತೆ
Published 28 ಮೇ 2019, 20:14 IST
Last Updated 28 ಮೇ 2019, 20:14 IST
ಮಂಜುನಾಥನಗರದ ನಿರ್ಮಾಣ ಹಂತದ ಕಟ್ಟಡದ ಮೇಲೆ ಹಾದು ಹೋಗಿರುವ ಹೈ– ಟೆನ್ಷನ್ ವೈರ್
ಮಂಜುನಾಥನಗರದ ನಿರ್ಮಾಣ ಹಂತದ ಕಟ್ಟಡದ ಮೇಲೆ ಹಾದು ಹೋಗಿರುವ ಹೈ– ಟೆನ್ಷನ್ ವೈರ್   

ಬೆಂಗಳೂರು: ನಗರದಲ್ಲಿ ಸೋಮವಾರ ಸಂಜೆ ಹೈ–ಟೆನ್ಷನ್ ವೈರ್ ತಗುಲಿ ಕಾರ್ಮಿಕ ಸತೀಶ್ (23) ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಬಸವೇಶ್ವರನಗರ ಠಾಣೆ ವ್ಯಾಪ್ತಿಯ ಮಂಜುನಾಥನಗರದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲೇ ಸತೀಶ್ ಅವರಿಗೆ ಹೈ–ಟೆನ್ಷನ್ ವೈರ್ ತಗುಲಿತ್ತು. ಅವಘಡದಿಂದಾಗಿ ಅವರ ದೇಹದ ಶೇ 60ರಷ್ಟು ಭಾಗ ಸುಟ್ಟಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮಿಳುನಾಡಿನ ಸತೀಶ್, ಕೆಲ ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರಾಗಿ ಸೇರಿಕೊಂಡಿದ್ದರು.

ADVERTISEMENT

ಸಡಿಲಗೊಂಡಿದ್ದ ತಂತಿ: ‘ನಿರ್ಮಾಣ ಹಂತದ ಕಟ್ಟಡದ ಮೇಲೆಯೇ ಹೈ–ಟೆನ್ಪನ್ ವೈರ್ ಹಾದುಹೋಗಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಆ ತಂತಿಯು ಸಡಿಲಗೊಂಡು ಕಟ್ಟಡದ ಮೇಲೆಯೇ ನೇತಾಡುತ್ತಿತ್ತು’ ಎಂದು ಸ್ಥಳೀಯರೊಬ್ಬರು ಹೇಳಿದರು.

‘ಎಂದಿನಂತೆ ಕಟ್ಟಡಕ್ಕೆ ಬಂದಿದ್ದ ಸತೀಶ್, ಕೆಲಸದಲ್ಲಿ ನಿರತರಾಗಿದ್ದರು. ನೇತಾಡುತ್ತಿದ್ದ ತಂತಿ ಅವರಿಗೆ ತಗುಲಿತ್ತು. ಆಗ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಅದನ್ನು ಗಮನಿಸಿದ ಸ್ಥಳೀಯ ಯುವಕರು, ಕೂಡಲೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ’ ಎಂದು ತಿಳಿಸಿದರು.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರನಗರ ಪೊಲೀಸರು, ‘ಹೈ– ಟೆನ್ಪನ್ ವೈರ್ ಇರುವ ಜಾಗದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಅದರಿಂದಲೇ ಈ ಅವಘಡ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದರು.

‘ಸತೀಶ್ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಮಾತನಾಡಲು ಸಾಧ್ಯವಾಗುತ್ತಿಲ್ಲ. ಅವರ ಸಂಬಂಧಿಕರಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.