ADVERTISEMENT

ಪ್ರಜ್ವಲ್‌ ರೇವಣ್ಣ ಪ್ರಕರಣ: ತಾರಕಕ್ಕೇರಿದ ಡಿಕೆಎಸ್‌, ಎಚ್‌ಡಿಕೆ ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 2 ಮೇ 2024, 15:50 IST
Last Updated 2 ಮೇ 2024, 15:50 IST
ಎಚ್‌ ಡಿ ಕುಮಾರಸ್ವಾಮಿ
ಎಚ್‌ ಡಿ ಕುಮಾರಸ್ವಾಮಿ    

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣ ಕುರಿತಂತೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ, ಸಂಸದ ಡಿ.ಕೆ. ಸುರೇಶ್ ಮಧ್ಯೆ ವಾಕ್ಸಮರ ಮುಂದುವರಿದಿದೆ.

‘ಪೆನ್‌ಡ್ರೈವ್‌ ಪ್ರಕರಣದ ಪ್ರಮುಖ ಸೂತ್ರದಾರ, ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಅವರನ್ನು ಮಲೇಷ್ಯಾಗೆ ಕಳುಹಿಸಿದ್ದು ಏಕೆ? ಅಲ್ಲಿಗೆ ಹೋಗಲು ಸಹಾಯ ಮಾಡಿದ್ದು ಯಾರು ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ಇದೆಲ್ಲ ಚಿಲ್ಲರೆ ಬ್ರದರ್ಸ್‌ ಕೆಲಸ. 420ಗಳಷ್ಟೇ ಇಂತಹ ಕೆಲಸ ಮಾಡಲು ಸಾಧ್ಯ’ ಎಂದು ಆರೋಪಿಸಿದ್ದಾರೆ.

‘ಪ್ರಕರಣದ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಿದೆ. ಮಲೇಷ್ಯಾಗೆ ಕಳುಹಿಲು ಯೋಜನೆ ಸಿದ್ಧಪಡಿಸಿದವರು ಯಾರು ಎನ್ನುವುದನ್ನು ಮೊದಲು ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದ್ದಾರೆ. 

ADVERTISEMENT

ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಸುರೇಶ್‌, ‘ರಾಜ್ಯವೇ ತಲೆ ತಗ್ಗಿಸುವ 420 ಕೆಲಸ ಮಾಡಿರುವುದು ಅವರ ಮಗ. ಇದು ಚಿಲ್ಲರೆ ಕೆಲಸವಾ’ ಎಂದು ಮರು ಪ್ರಶ್ನಿಸಿದ್ದಾರೆ. 

ಈ ಕುರಿತು ಎಕ್ಸ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಕುಮಾರಸ್ವಾಮಿ ಮೊದಲು ಹೆಣ್ಣುಮಕ್ಕಳಿಗೆ ಗೌರವ ಕೊಡುವುದನ್ನು ಕಲಿಯಲಿ. ನಮ್ಮ ಬಗ್ಗೆ ಮಾತನಾಡದೆ ಇದ್ದರೆ ಅವರಿಗೆ ಊಟ ಸೇರುವುದೇ ಇಲ್ಲ. ಪ್ರತಿ ವಿಷಯಕ್ಕೂ ನಮ್ಮ ಹೆಸರು ತರುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ. ಕೆ ಸುರೇಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.