ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಜನ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇವೇಂದ್ರ ಫಡಣವೀಸ್ ಅವರ ಜನಪರ ಆಡಳಿತಕ್ಕೆ ಮನ್ನಣೆ ನೀಡಿದ್ದರು. ಆದರೆ, ಶಿವಸೇನಾ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಬಾಳಾ ಸಾಹೇಬ್ ಠಾಕ್ರೆ ಅವರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ. ಆದ್ದರಿಂದ ನಾವು ಅನಿವಾರ್ಯವಾಗಿ ಸರ್ಕಾರ ರಚನೆ ಮಾಡಬೇಕಾಯಿತು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಅಧಿಕಾರದ ಆಸೆ ಹಾಗೂ ದುರಹಂಕಾರದಿಂದ ನಡೆದುಕೊಂಡ ಶಿವಸೇನಾ ಜನಾದೇಶವನ್ನು ತಿರಸ್ಕರಿಸಿತು. ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರದ ಅನಿವಾರ್ಯತೆಯಿದ್ದ ಕಾರಣ ಎನ್ಸಿಪಿ ಜೊತೆ ಕೈ ಜೋಡಿಸಿದ್ದೇವೆ. ಶಿವಸೇನೆಯ ಅಧಿಕಾರದ ದುರಾಸೆಗೆ ಸರಿಯಾದ ಪಾಠ ಕಲಿಸಿದ್ದೇವೆ ಎಂದು ಪಕ್ಷದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಫಡಣವೀಸ್ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಖುದ್ದು ಪ್ರಧಾನಿಯೇ ಶಿವಸೇನಾ ನಾಯಕರಿಗೆ ಹೇಳಿದಾಗ ಯಾರೂ ಮಾತನಾಡಿರಲಿಲ್ಲ. ಬಳಿಕ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಆದರೂ, ಶಿವಸೇನಾ ಸುಧಾರಿಸಬಹುದು ಎಂದು ಒಂದು ತಿಂಗಳಿಂದ ತಾಳ್ಮೆಯಿಂದ ಕಾದಿದ್ದೆವು. ಶಿವಸೇನಾ, ಬಿಜೆಪಿಗೆ ಬ್ಲಾಕ್ಮೇಲ್ ಮಾಡುವ ಕುತಂತ್ರ ಮಾಡಿತು. ಬಿಜೆಪಿ ಅನೈತಿಕ ರಾಜಕಾರಣ ಮಾಡಿಲ್ಲ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.