ಬೆಂಗಳೂರು: ಹಿಂದಿ ಬಳಕೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಯನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಷಿ ಸಮರ್ಥಿಸಿಕೊಂಡರು.
ಭಾರತೀಯ ವಿಕಾಸ ಕೇಂದ್ರ- ಕರ್ನಾಟಕ ಹಮ್ಮಿಕೊಂಡಿದ್ದ'ಒಂದು ದೇಶ- ಒಂದು ಚುನಾವಣೆ' ಕುರಿತ ಸಂವಾದದಲ್ಲಿ ಮಾತನಾಡಿದ ಅವರು 'ಹೊರ ರಾಜ್ಯಗಳಿಗೆ ಹೋದಾಗ ಇಂಗ್ಲಿಷ್ ಬದಲು ಹಿಂದಿ ಬಳಸುವಂತೆ ಅಮಿತ್ ಶಾ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ' ಎಂದು ಪ್ರಶ್ನಿಸಿದರು.
'ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗೆ ಒತ್ತು ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡಕ್ಕೇ ಆದ್ಯತೆ ಸಿಗಲಿದೆ. 70 ವರ್ಷ ದೇಶವನ್ನು ಆಳಿದವರು ತಾಂತ್ರಿಕ ಶಿಕ್ಷಣದಲ್ಲಿ ಸ್ಥಳೀಯ ಭಾಷೆಗೆ ಮನ್ನಣೆ ನೀಡಿರಲಿಲ್ಲ. ನಾವು ಆ ಕೆಲಸ ಮಾಡಿದ್ದೇವೆ' ಎಂದರು.
'ಮೊಘಲರಂತೆ ಆಂಗ್ಲರೂ ನಮ್ಮ ದೇಶವನ್ನು ಹಾಳು ಮಾಡಿದ್ದಾರೆ. ನೂರಿನ್ನೂರು ವರ್ಷಗಳ ಇತಿಹಾಸವಿರುವ ಇಂಗ್ಲಿಷ್ ಭಾಷೆಗೆ ಏಕಿಷ್ಟು ಒತ್ತು ಕೊಡಬೇಕು. ಆ ಭಾಷೆ ಮೇಲೆ ಒಲವು ಹೊಂದಿರುವ ನಮಗೆ ಹಿಂದಿ ಬೇಡ ಅಂದರೆ ಹೇಗೆ' ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.