ADVERTISEMENT

ಐಟಿಐ: 62 ಅಧಿಕಾರಿಗಳಿಗೆ ಹಿಂಬಡ್ತಿ

ಉದ್ಯೋಗ ಇಲಾಖೆ

ರಾಜೇಶ್ ರೈ ಚಟ್ಲ
Published 1 ಡಿಸೆಂಬರ್ 2024, 23:30 IST
Last Updated 1 ಡಿಸೆಂಬರ್ 2024, 23:30 IST
   

ಬೆಂಗಳೂರು: ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ಕಿರಿಯ ತರಬೇತಿ ಅಧಿಕಾರಿ (ಜೆಟಿಒ) ಹುದ್ದೆಯಿಂದ ನೇರವಾಗಿ ಪ್ರಾಚರ್ಯ (ಸಹಾಯಕ ನಿರ್ದೇಶಕ) ಹುದ್ದೆಗೆ ಮುಂಬಡ್ತಿ ಪಡೆದಿದ್ದ 62 ಅಧಿಕಾರಿಗಳಿಗೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಿಂಬಡ್ತಿ ನೀಡಿದೆ.

ಹಿಂಬಡ್ತಿ ಪಡೆದವರ ಪೈಕಿ, 22 ಅಧಿಕಾರಿಗಳು (ಇಬ್ಬರು ಸ್ವಯಂ ನಿವೃತ್ತಿ) ಈಗಾಗಲೇ ನಿವೃತ್ತರಾಗಿದ್ದಾರೆ. ಐವರು ಮೃತಪಟ್ಟಿದ್ದಾರೆ. ಒಬ್ಬರು ಕರ್ತವ್ಯದಿಂದ ಬಿಡುಗಡೆಗೊಂಡಿದ್ದು, ಉಳಿದ 34 ಅಧಿಕಾರಿಗಳು ಕರ್ತವ್ಯದಲ್ಲಿದ್ದಾರೆ.

ಮುಂಬಡ್ತಿ ನೀಡಿರುವುದು ನಿಯಮಬಾಹಿರವೆಂದು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ), ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದು 10 ತಿಂಗಳು ಕಳೆದ ಬಳಿಕ ಇಲಾಖೆ ಈ ಕ್ರಮ ತೆಗೆದುಕೊಂಡಿದೆ. ತೀರ್ಪು ಜಾರಿ ಆಗಿಲ್ಲವೆಂದು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಯುತ್ತಿರುವ ಮಧ್ಯೆ, ನ. 28ರಂದು ಇಲಾಖೆಯು ಹಿಂಬಡ್ತಿ ಆದೇಶವನ್ನು ಹೊರಡಿಸಿದೆ. ಆದರೆ, ಮುಂಬಡ್ತಿಯಿಂದ ವಂಚಿತರಾಗಿದ್ದ ಅರ್ಹರಿಗೆ ಪದೋನ್ನತಿ ನೀಡಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ADVERTISEMENT

ಏನಿದು ಪ್ರಕರಣ:

1985ರ ವೃಂದ ಮತ್ತು ನೇಮಕಾತಿ ನಿಯಮವನ್ನು 1998ರಲ್ಲಿ ತಿದ್ದುಪಡಿ ಮಾಡಿದ್ದ ಇಲಾಖೆ, ಪ್ರಾಚರ್ಯ ದರ್ಜೆ-2ರ (ಸಹಾಯಕ ನಿರ್ದೇಶಕ–ತರಬೇತಿ) ಹುದ್ದೆಗಳಿಗೆ ಮುಂಬಡ್ತಿ ನೀಡುವಾಗ, ಬಿ.ಇ ಎಂಜಿನಿಯರಿಂಗ್ ಪದವಿ ಪಡೆದ ಕಿರಿಯ ತರಬೇತಿ ಅಧಿಕಾರಿಗಳಿಗೆ ಶೇ 33ರಷ್ಟು ಕೋಟಾ ನಿಗದಿಪಡಿಸಿತ್ತು. ಈ ತಿದ್ದುಪಡಿಯ ನಂತರ ಇಲಾಖೆಯು (1999ರಿಂದ 2011ರವರೆಗೆ) 62 ಮಂದಿಗೆ ಜೆಟಿಒ ಹುದ್ದೆಯಿಂದ ನೇರವಾಗಿ ಪ್ರಾಚರ್ಯ (ಸಹಾಯಕ ನಿರ್ದೇಶಕರು– ತರಬೇತಿ) ಹುದ್ದೆಗೆ ಮುಂಬಡ್ತಿ ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕೆಎಟಿ 2008ರಲ್ಲಿಯೇ ಈ ಕೋಟಾವನ್ನು ಅನೂರ್ಜಿತಗೊಳಿಸಿತ್ತು. ವಿಶೇಷವೆಂದರೆ, ಕೆಎಟಿ ಆದೇಶ ನೀಡಿದ ನಂತರ 17 ಮಂದಿಗೆ ಇಲಾಖೆ ಬಡ್ತಿ ನೀಡಿದೆ.

ಕೆಎಟಿ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಕೆಎಟಿ ತೀರ್ಪನ್ನು ಹೈಕೋರ್ಟ್‌ 2012 ರಲ್ಲಿ ಎತ್ತಿಹಿಡಿದಿತ್ತು. ಇದರಿಂದ ಹಿಂಬಡ್ತಿ ಭೀತಿಗೆ ಒಳಗಾದ ಅಧಿಕಾರಿಗಳು ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ (ಎಸ್‌ಎಲ್‌ಪಿ) ಸಲ್ಲಿಸಿದ್ದರು. 2012ರಲ್ಲಿಯೇ ಮಧ್ಯಂತರ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, 2024ರ ಜನವರಿಯಲ್ಲಿ ಎಸ್‌ಎಲ್‌ಪಿಯನ್ನು ವಜಾಗೊಳಿಸಿದೆ.

ಕೆಎಟಿ ತೀರ್ಪು ನೀಡಿ 16 ವರ್ಷ ಮತ್ತು ಹೈಕೋರ್ಟ್ ತೀರ್ಪು ನೀಡಿ 12 ವರ್ಷ ಕಳೆದಿದೆ. ಅದೇ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದರೂ ಜಾರಿಗೊಳಿಸಲು ಮುಂದಾಗದ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ಮತ್ತು ಆಯುಕ್ತರ ವಿರುದ್ಧ ಮುಂಬಡ್ತಿಗೆ ಅರ್ಹರಾಗಿದ್ದ ಅಧಿಕಾರಿಗಳು ಕೆಎಟಿಯಲ್ಲಿ ನ್ಯಾಯಾಂಗ ನಿಂದನಾ ಅರ್ಜಿ ಸಲ್ಲಿಸಿದ್ದರು.

‘ಹಲವು ವರ್ಷಗಳ ನಿರಂತರ ಕಾನೂನು ಹೋರಾಟದ ನಂತರ ಅನರ್ಹರಿಗೆ ಇಲಾಖೆ ಹಿಂಬಡ್ತಿ ನೀಡಿದೆ. ಆದರೆ, ಇಲಾಖೆ ಮಾಡಿದ ತಪ್ಪಿನಿಂದಾಗಿ 1998ರಿಂದಲೂ ಮುಂಬಡ್ತಿಯಿಂದ ವಂಚಿತರಾದ ಅರ್ಹರಿಗೆ ಪದೋನ್ನತಿ ನೀಡಬೇಕೆಂದು ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದ್ದರೂ ಇಲಾಖೆಯ ಹಿರಿಯ ಅಧಿಕಾರಿಗಳು ಮೀನಾಮೇಷ ಎನಿಸುತ್ತಿದ್ದಾರೆ. ಕೋರ್ಟ್ ಆದೇಶವನ್ನು ಇಲಾಖೆ ಜಾರಿ ಮಾಡದ ಕಾರಣ, ಕೆಪಿಎಸ್‌ಸಿ ಮೂಲಕ 2008ರಲ್ಲಿ ಇಲಾಖೆಗೆ ನೇರವಾಗಿ ನೇಮಕವಾದ ಅಧಿಕಾರಿಗಳು ಮುಂಬಡ್ತಿಯಿಂದ ವಂಚಿತರಾಗಿದ್ದಾರೆ’ ಎಂದು ಅಧಿಕಾರಿಯೊಬ್ಬರು ದೂರಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಇಲಾಖೆಯ ಆಯುಕ್ತರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಲಭ್ಯರಾಗಲಿಲ್ಲ.

ಈ ತಿದ್ದುಪಡಿಯ ನಂತರ ಇಲಾಖೆಯು (1999ರಿಂದ 2011ರವರೆಗೆ) 62 ಮಂದಿಗೆ ಜೆಟಿಒ ಹುದ್ದೆಯಿಂದ ನೇರವಾಗಿ ಪ್ರಾಚರ್ಯ (ಸಹಾಯಕ ನಿರ್ದೇಶಕರು– ತರಬೇತಿ) ಹುದ್ದೆಗೆ ಮುಂಬಡ್ತಿ ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕೆಎಟಿ 2008ರಲ್ಲಿಯೇ ಈ ಕೋಟಾವನ್ನು ಅನೂರ್ಜಿತಗೊಳಿಸಿತ್ತು. ವಿಶೇಷವೆಂದರೆ, ಕೆಎಟಿ ಆದೇಶ ನೀಡಿದ ನಂತರ 17 ಮಂದಿಗೆ ಇಲಾಖೆ ಬಡ್ತಿ ನೀಡಿದೆ.

26 ವರ್ಷಗಳ ಹಿಂದಿನ ಪ್ರಕರಣ

ಆದರೆ, ಹೆಚ್ಚಿನ ಸಮಯಾವಕಾಶ ಕೇಳಿದ ಕಾರಣ, ತೀರ್ಪನ್ನು ಯಥಾವತ್‌ ಜಾರಿಗೊಳಿಸಿ, ವರದಿ ಸಹಿತ ನ.8 ರಂದು ಹಾಜರಾಗುವಂತೆ ಇಲಾಖೆಯ ಎಸಿಎಸ್‌ ಮತ್ತು ಆಯುಕ್ತರಿಗೆ ಕೆಎಟಿ ಸೂಚಿಸಿತ್ತು. ಆದರೂ, ಅಧಿಕಾರಿಗಳು ಕ್ರಮ ತೆಗೆದುಕೊಳ್ಳದ ಕಾರಣ, ನ. 29ರ ಒಳಗೆ ಹಾಜರಾಗಲು ಸೂಚಿಸಿತ್ತು.
ನ. 28ರಂದು ಹಿಂಬಡ್ತಿ ಆದೇಶ ಹೊರಡಿಸಿದ ಇಲಾಖೆ, ಅದನ್ನು ಕೆಎಟಿ ಗಮನಕ್ಕೆ ತಂದಿದೆ. ಆದರೆ, ಅರ್ಹರಿಗೆ ಮುಂಬಡ್ತಿ ನೀಡಲು ಮುಂದಾಗಿಲ್ಲ.

‘ಎಸಿಎಸ್‌, ಆಯುಕ್ತರಿಗೆ ತಲಾ ₹5 ಸಾವಿರ ದಂಡ’

ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯ ವೇಳೆ, ತೀರ್ಪನ್ನು ಸಂಪೂರ್ಣವಾಗಿ ಪಾಲಿಸದ ಮತ್ತು ಈ ಹಿಂದಿನ ವಿಚಾರಣೆ ವೇಳೆ ಖುದ್ದು ಹಾಜರಾಗುವಂತೆ ಸೂಚಿಸಿದರೂ ಗೈರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕೆಎಟಿ, ಇಲಾಖೆಯ ಆಯುಕ್ತರು ಮತ್ತು ಎಸಿಎಸ್‌ಗೆ ಜಾಮೀನು ಸಹಿತ ವಾರಂಟ್‌ ಹೊರಡಿಸಿ, ತಲಾ ₹5 ಸಾವಿರ ದಂಡ ವಿಧಿಸಿದೆ. ಅಲ್ಲದೆ, ವಿಚಾರಣೆಯನ್ನು ಡಿ. 13ಕ್ಕೆ ಮುಂದೂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.