ಹೊಸಪೇಟೆ: ‘ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮಾಡಿರುವ ಟ್ವೀಟ್ ಅನ್ನು ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿರುವುದು ತರವಲ್ಲ. ತನ್ನ ಆದೇಶವನ್ನು ಸುಪ್ರೀಂಕೋರ್ಟ್ ಮರು ಪರಿಶೀಲಿಸಬೇಕು’ ಎಂದು ಅಖಿಲ ಭಾರತ ವಕೀಲರ ಯೂನಿಯನ್ ಆಗ್ರಹಿಸಿದೆ.
‘ಸುಪ್ರೀಂಕೋರ್ಟ್ ಆದೇಶವು ಸಂವಿಧಾನದ ಅಭಿವ್ಯಕ್ತಿ ಮತ್ತು ವಿವೇಚನಾ ಸ್ವಾತಂತ್ರ್ಯವನ್ನು ನಿರಾಕರಿಸುವಂತಿದೆ. ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತಿರುವ ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ನ್ಯಾಯಾಲಯದ ಈ ಆದೇಶ ಜನರಲ್ಲಿ ಆತಂಕ ಹುಟ್ಟಿಸಿದೆ’ ಎಂದು ಯೂನಿಯನ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎ. ಕರುಣಾನಿಧಿ, ಮುಖಂಡರಾದ ಬಿಸಾಟಿ ಮಹೇಶ್, ಕೆ. ಪ್ರಹ್ಲಾದ್, ಕಲ್ಯಾಣಯ್ಯ, ಬಸವರಾಜ ಗುರುವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಹಕ್ಕುಗಳನ್ನು ರಕ್ಷಿಸಬೇಕಾದ ನ್ಯಾಯಾಂಗವು ಇಂತಹ ತೀರ್ಪುಗಳಿಂದ ಖುದ್ದು ಅಪಮಾನಕ್ಕೆ ಗುರಿಯಾಗುತ್ತಿದೆ. ನ್ಯಾಯಾಂಗದ ಘನತೆ, ಸಮಗ್ರತೆ ಎತ್ತಿ ಹಿಡಿಯುವರಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ. ಅನೇಕ ವರ್ಷಗಳಿಂದ ಸಾಮಾಜಿಕ ಹೋರಾಟ, ವಕೀಲಿಕೆ ಮಾಡುತ್ತಿರುವ ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಲಯ ಕೊಟ್ಟಿರುವ ಆದೇಶ ಮರು ಪರಿಶೀಲಿಸಿ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು’ ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.