ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪಶ್ಚಿಮ ವಲಯದ ವಿವಿಧ ಪೊಲೀಸ್ ಠಾಣೆಗಳ ಪೊಲೀಸ್ ಸಿಬ್ಬಂದಿಯನ್ನು ಸೋಮವಾರ ಸನ್ಮಾನಿಸಲಾಯಿತು.
ಪಶ್ಚಿಮ ವಲಯದ ಐಜಿಪಿ ದೇವಜ್ಯೋತಿ ರೇ ಅವರು ಪೊಲೀಸ್ ಸಿಬ್ಬಂದಿಗೆ ಬಹುಮಾನಗಳನ್ನು ವಿತರಿಸಿದರು. ಬೆಳ್ಳಾರೆ, ಸುಳ್ಯ, ಸುಬ್ರಹ್ಮಣ್ಯ, ಕಡಬ, ವಿಟ್ಲ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಠಾಣೆಗಳ ಪೊಲೀಸ್ ಸಿಬ್ಬಂದಿ ಐಜಿಪಿ ಅವರಿಂದ ಬಹುಮಾನ ಸ್ವೀಕರಿಸಿದರು.
‘ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ 82 ಮಂದಿಯನ್ನುಒಳಗೊಂಡ ತಂಡವು ಅತ್ಯಂತ ಸೂಕ್ಷ್ಮವಾಗಿದ್ದ ಈ ಪ್ರಕರಣದಲ್ಲಿ ಆರೋಪಿಗಳನ್ನು ತ್ವರಿತವಾಗಿ ಬಂಧಿಸುವಲ್ಲಿ ಸಫಲವಾಗಿದೆ. ಕಗ್ಗಂಟಾಗಿದ್ದ ಈ ಪ್ರಕರಣವನ್ನು ಭೇದಿಸಿದ ಶ್ರೇಯ ಯಾವುದೇ ಒಬ್ಬ ಅಧಿಕಾರಿ ಅಥವಾ ಸಿಬ್ಬಂದಿಗೆ ಸೇರಿದ್ದಲ್ಲ. ಇದೊಂದು ಸಾಂಘಿಕ ಪ್ರಯತ್ನ’ ಎಂದು ದೇವಜ್ಯೋತಿ ರೇ ಹೇಳಿದರು.
’ತನಿಖಾ ತಂಡವು ಹಗಲು ರಾತ್ರಿ ಕೆಲಸ ನಿರ್ವಹಿಸಿ ಸಾಕ್ಷ್ಯಾಧಾರ ಕಲೆಹಾಕಿದೆ. ಆರೋಪಿಗಳನ್ನು ಬಂಧಿಸುವಲ್ಲಿಯೂ ಯಶಸ್ವಿಯಾಗಿದೆ.ಈಪ್ರಕರಣದಬಳಿಕನಿರ್ಮಾಣವಾಗಿದ್ದಕೋಮುಸೂಕ್ಷ್ಮವಾತಾವರಣವನ್ನುನಿಭಾಯಿಸುವಲ್ಲೂಇಲಾಖೆಯಸಿಬ್ಬಂದಿಯಶಸ್ವಿಯಾಗಿದ್ದಾರೆ’ಎಂದು ಅವರು ಮೆಚ್ಚುಗೆ ಸೂಚಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೊನಾವಣೆ ಇದ್ದರು.
ಬೆಳ್ಳಾರೆ ಪಟ್ಟಣದಲ್ಲಿ ಜುಲೈ 26ರಂದು ರಾತ್ರಿ ಪ್ರವೀಣ್ ನೆಟ್ಟಾರು ಅವರ ಹತ್ಯೆ ನಡೆದಿತ್ತು. ಆ ಬಳಿಕ ಜಿಲ್ಲೆಯಲ್ಲಿ ಕೋಮು ಸೂಕ್ಷ್ಮ ವಾತಾವರಣ ಸೃಷ್ಟಿಯಾಗಿತ್ತು. ಆರೋಪಿಗಳ ಬಗ್ಗೆ ಯಾವುದೇ ಸುಳಿವು ಇಲ್ಲದೇ ಕಗ್ಗಂಟಾಗಿದ್ದ ಈ ಪ್ರಕರಣವನ್ನು ಭೇದಿಸುವುದು ಪೊಲೀಸರ ಪಾಲಿಗೂ ಸವಾಲಿನ ವಿಷಯವಾಗಿತ್ತು. ಆರೋಪಿಗಳ ಪತ್ತೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ 82 ಮಂದಿಯ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ಪೊಲೀಸರು ಈ ಪ್ರಕರಣದ ಪ್ರಮುಖ ಆರೋಪಿಗಳಾದ ನಾವೂರಿನ ಮೊಹಮದ್ ಶಿಯಾಬ್, ಎಲಿಮಲೆಯ ಅಬ್ದುಲ್ ಬಷೀರ್, ಅಂಕತಡ್ಕದ ರಿಯಾಜ್ ಸೇರಿದಂತೆ ಒಟ್ಟು 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಈಗ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನಡೆಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.