ADVERTISEMENT

ಪಶ್ಚಿಮಘಟ್ಟ: ಕೃಷಿ, ಪ್ಲಾಂಟೇಷನ್‌ ಭೂಪರಿವರ್ತನೆ ತಡೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 20:12 IST
Last Updated 1 ಸೆಪ್ಟೆಂಬರ್ 2022, 20:12 IST

ಬೆಂಗಳೂರು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕೃಷಿ ಮತ್ತು ಪ್ಲಾಂಟೇಷನ್‌ ಭೂಮಿಯನ್ನು ಅನ್ಯ ಉದ್ದೇಶಗಳ ಪರಿವರ್ತನೆಗೆ ಅವಕಾಶ ನೀಡಬಾರದು ಎಂದು ಸಂಯುಕ್ತ ಸಂರಕ್ಷಣಾ ಆಂದೋಲನ ಸರ್ಕಾರವನ್ನು ಒತ್ತಾಯಿಸಿದೆ.

ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ, ದಕ್ಷಿಣಕನ್ನಡ, ಹಾಸನ ಜಿಲ್ಲೆಗಳ ಪಶ್ಚಿಮಘಟ್ಟದ ತಪ್ಪಲು ಪ್ರದೇಶ ರಕ್ಷಿಸಲು ಮತ್ತು ಅಲ್ಲಿ ವಾಸಿಸುವ ಸ್ಥಳೀಯರ ಬದುಕಿನ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು, ಈ ಪ್ರದೇಶಕ್ಕೆ ಒಪ್ಪಿತವಾಗುವ ನೀತಿ–ನಿಯಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದೆ.

ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವ ದಲಿತ, ಕೃಷಿ– ಕಾರ್ಮಿಕ, ಆದಿವಾಸಿಗಳಿಗೆ ಭೂಮಿ ಹಕ್ಕು ಸಿಕ್ಕಿಲ್ಲ. ಈ ಮಧ್ಯೆ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ನೂರಾರು ಎಕರೆ ಕಾಫಿ ತೋಟಗಳು ಮಾರಾಟಕ್ಕಿವೆ. ಇಂತಹ ಜಮೀನನ್ನು ಸರ್ಕಾರ ಸೂಕ್ತ ಬೆಲೆ ಕೊಟ್ಟು ಖರೀದಿಸಿ, ಅದನ್ನು ಭೂರಹಿತರಿಗೆ ಹಂಚುವ ಕೆಲಸ ಮಾಡಬೇಕು. ರೈತರು ಬೆಳೆಯುವ ಭತ್ತಕ್ಕೆ ಅತಿ ಹೆಚ್ಚು ಬೆಂಬಲ ಬೆಲೆ ನೀಡುವ ಮೂಲಕ ಅವರು ಕೃಷಿಯಿಂದ ವಿಮುಖರಾಗುವುದನ್ನು ತಡೆಯುವ ಕೆಲಸ ಆಗಬೇಕು ಎಂದು ಹೇಳಿದೆ.

ADVERTISEMENT

ಪಶ್ಚಿಮಘಟ್ಟ ಇಡೀ ದೇಶಕ್ಕೆ ಸೇರಿದ ಅಮೂಲ್ಯ ಸಂಪತ್ತು. ಇಲ್ಲಿನ ಭೌಗೋಳಿಕ ರಚನೆಯನ್ನೇ ಬದಲಿಸಿ, ಆ ಮೂಲಕ ಅಪಾಯಕ್ಕೆ ಆಹ್ವಾನ ನೀಡುವ ಅಭಿವೃದ್ಧಿ ಕಲ್ಪನೆಗಳು ಬದಲಾಗಬೇಕು. ಮುಖ್ಯವಾಗಿ, ಪ್ರವಾಸೋದ್ಯಮ ಉತ್ತೇಜಿ ಸುವ ಉದ್ದೇಶದಿಂದ ಭೂಪರಿವರ್ತನೆ ನಿಯಮಗಳಿಗೆ ತಿದ್ದುಪಡಿ ತರಬೇಕು ಎಂದೂ ಹೇಳಿದೆ.

ಗುಡ್ಡಗಾಡುಗಳಿಗೆ ಸೂಕ್ತವಾಗು ವಂತೆ ವೈಜ್ಞಾನಿಕ ಆಧಾರಿತ ನಿಯಮಗಳಿಗೆ ಅನುಗುಣವಾಗಿಯೇ ಮನೆ ನಿರ್ಮಿಸಬೇಕು. ಭೂಮಿ ಕುಸಿ ಯದಂತೆ ಕಾಪಾಡುವ ಪೂರಕ ಅರಣ್ಯ ಬೆಳೆಸುವಂತೆ ನೋಡಿಕೊಳ್ಳಬೇಕು. ಪರಿಸರ ಸೂಕ್ಷ್ಮ ಪ್ರದೇಶದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿ ಕಾರಿಗಳು, ತಹಶೀಲ್ದಾರ್‌ ಮಟ್ಟದ ಅಧಿಕಾರಿಗಳಿಗೆ ಇಲ್ಲಿನ ಜೀವವೈವಿಧ್ಯದ ಕುರಿತಾಗಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.