ADVERTISEMENT

ಮತ್ತೊಮ್ಮೆ ರಾಜ್ಯಕ್ಕೆ ಬರಲಿರುವ ಪ್ರಧಾನಿ ಮೋದಿ; 25ರಂದು ‘ಮೆಟ್ರೊ ಶೋ’

ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2023, 23:41 IST
Last Updated 16 ಮಾರ್ಚ್ 2023, 23:41 IST
   

ಬೆಂಗಳೂರು: ಇದೇ 25ರಂದು ಮತ್ತೊಮ್ಮೆ ರಾಜ್ಯಕ್ಕೆ ಬರಲಿರುವ ಪ್ರಧಾನಿ ನರೇಂದ್ರ ಮೋದಿ,‌ ದಾವಣಗೆರೆ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ದಾವಣಗೆರೆಯಲ್ಲಿ ನಡೆಯಲಿದ್ದು, ಅದರಲ್ಲಿ ಭಾಗವಹಿಸಲಿರುವ ಪ್ರಧಾನಿ, ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಶ್ರೀಮಧುಸೂದನ್‌ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಅದೇ ದಿನ ಬೆಂಗಳೂರಿನಲ್ಲಿ ಕೆ.ಆರ್. ಪುರ– ವೈಟ್‌ಫೀಲ್ಡ್‌ ಮೆಟ್ರೊ ಮಾರ್ಗ ಲೋಕಾರ್ಪಣೆ ಮಾಡಲಿರುವ ಅವರು ಮೆಟ್ರೊದಲ್ಲಿ ಸಂಚರಿಸಲಿದ್ದಾರೆ.

ವಿಧಾನಸೌಧ ಮುಂಭಾಗದಲ್ಲಿ ಸ್ಥಾಪಿಸಲಾಗುವ ಬಸವೇಶ್ವರ ಮತ್ತು ಕೆಂಪೇಗೌಡ ಪುತ್ಥಳಿ ಅನಾವರಣಗೊಳಿಸಲು ಇದೇ 27 ಅಥವಾ 29ರಂದು ಮತ್ತೊಮ್ಮೆ ಮೋದಿ ರಾಜ್ಯಕ್ಕೆ ಭೇಟಿ ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆ ಬಳಿಕ, ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭೆ ಚುನಾವಣೆಯ ದಿನ ಘೋಷಿಸಬಹುದು ಎಂಬ ತರ್ಕವೂ ಇದೆ. ಆದರೆ, ಈ ಪುತ್ಥಳಿಗಳು ಇನ್ನೂ ಸಿದ್ಧವಾಗದೇ ಇರುವುದರಿಂದ 27 ಅಥವಾ 29ರಂದು ಮೋದಿ ಬರುವ ಸಾಧ್ಯತೆ ಕಡಿಮೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ADVERTISEMENT

ತಪ್ಪಿತೇ ಲೆಕ್ಕಾಚಾರ: ಚುನಾವಣೆಗೂ ಮೊದಲೇ ವಿಧಾನಸೌಧದ ಮುಂಭಾಗದಲ್ಲಿ ಜಗಜ್ಯೋತಿ ಬಸವೇಶ್ವರ ಮತ್ತು ನಾಡಪ್ರಭು ಕೆಂಪೇಗೌಡರ ಪುತ್ಥಳಿ ಸ್ಥಾಪಿಸಿ, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಮತಬೇಟೆಗೆ ಬಿಜೆಪಿ ಲೆಕ್ಕಾಚಾರ ಹಾಕಿತ್ತು. ಎರಡೂ ಪುತ್ಥಳಿಗಳ ಸ್ಥಾಪನೆಗೆ ಜ. 13ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂಮಿ ಪೂಜೆ ನೆರವೇರಿದ್ದರು. ವಸತಿ ಸಚಿವ ವಿ. ಸೋಮಣ್ಣ ಮತ್ತು ಕಂದಾಯ ಸಚಿವ ಆರ್‌. ಅಶೋಕ ಈ ಪುತ್ಥಳಿಗಳ ಸ್ಥಾಪನೆಗೆ ಅತೀವ ಆಸಕ್ತಿ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.