ಪ್ರಿಯಾಂಕ್ ಖರ್ಗೆ ಮತ್ತು ಆರ್. ಅಶೋಕ
ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಶಾಖೆಗೆ ಹೋಗಿ ದೊಣ್ಣೆ ಹಿಡಿಯುವುದನ್ನು ಬಿಟ್ಟು ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಬೇಕಿತ್ತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಹೂಡಿಕೆದಾರರನ್ನು ಮತ್ತು ಸ್ಟಾರ್ಟ್ಅಪ್ಗಳನ್ನು ಹೆದರಿಸಿ, ಬೆದರಿಸಿ, ಅವಮಾನ ಮಾಡಿ ಬೆಂಗಳೂರಿನ ವರ್ಚಸ್ಸಿಗೆ, ಜಾಗತಿಕ ಬ್ರ್ಯಾಂಡ್ಗೆ ಧಕ್ಕೆ ತಂದಿದೆ ಎನ್ನುವ ಅಶೋಕ ಅವರ ಆರೋಪಗಳಿಗೆ ಪ್ರಿಯಾಂಕ್ ಹೀಗೆ ತಿರುಗೇಟು ನೀಡಿದ್ದಾರೆ.
‘ನಮಸ್ತೆ ಟ್ರಂಪ್ಗಾಗಿ ಗುಜರಾತಿನ ಅಹಮದಾಬಾದ್ನ ಅವ್ಯವಸ್ಥೆಗಳಿಗೆ, ಬಡತನಕ್ಕೆ, ಕಸದ ಕೊಂಪೆಗಳಿಗೆ ಟಾರ್ಪಲ್ ಹಾಕಿ ಮುಚ್ಚಿಟ್ಟಿದ್ದಂತಹ ಪರಿಸ್ಥಿತಿ ಬೆಂಗಳೂರಿನಲ್ಲಿಲ್ಲ. ಜಿ20 ಶೃಂಗಸಭೆಗಾಗಿ ದೆಹಲಿಯ ಬಡವರಿಗೆ ದಿಗ್ಬಂಧನ ವಿಧಿಸಿ, ಬಡವರನ್ನು, ಬಡತನವನ್ನು ಬಂಧನದಲ್ಲಿಟ್ಟಿದ್ದಂತಹ ದುಃಸ್ಥಿತಿ ಬೆಂಗಳೂರಿಗೆ ಬಂದಿಲ್ಲ’ ಎಂದು ಪ್ರಿಯಾಂಕ್ ಬರೆದುಕೊಂಡಿದ್ದಾರೆ.
‘ಛತ್ ಪೂಜೆಗಾಗಿ ಯಮುನಾ ನದಿಯ ಪಕ್ಕದಲ್ಲಿ ಫಿಲ್ಟರ್ ನೀರಿನ ಕೊಳ ನಿರ್ಮಿಸಿ, ಯಮುನಾ ನದಿಯ ಅವ್ಯವಸ್ಥೆಯನ್ನು ಮರೆಮಾಚಿದಂತಹ ದುಃಸ್ಥಿತಿ ನಮಗೆ ಬಂದಿಲ್ಲ. ಬೆಂಗಳೂರಿನ ಬಗ್ಗೆ ಬಿಜೆಪಿಯವರಿಗೆ ಹೆಮ್ಮೆ ಎನಿಸದಿರಬಹುದು, ನಮಗೆ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ.
ಬೆಂಗಳೂರಿನ ಮಹತ್ವದ ಬಗ್ಗೆ ಬಿಜೆಪಿಯವರಿಗೆ ಅರಿವಿಲ್ಲದಿರಬಹುದು, ಮರ್ಸಿಡಿಸ್ ಬೆಂಜ್ ನ CEOರಿಂದ ಹಿಡಿದು ದೇಶದ ಹೂಡಿಕೆದಾರರವರೆಗೂ ಅದರ ಅರಿವಿದೆ. ಜಾಗತಿಕ ಸ್ಟಾರ್ಟ್ ಅಪ್ ಎಕೊಸಿಸ್ಟಮ್ ಸೂಚ್ಯಂಕದಲ್ಲಿ ಬೆಂಗಳೂರು 14ನೇ ಸ್ಥಾನಕ್ಕೆ ಏರಿರುವುದು ನಮ್ಮ ಕಾರ್ಯವೈಖರಿಗೆ ಹಿಡಿದ ಕನ್ನಡಿ ಎಂದಿದ್ದಾರೆ.
ಅಶೋಕ ಅವರು ಶಾಖೆಗೆ ಹೋಗಿ ದೊಣ್ಣೆ ಹಿಡಿಯದನ್ನು ಬಿಟ್ಟು ಜಗತ್ತಿನ ಆಗುಹೋಗುಗಳ ಬಗ್ಗೆ, ಬೆಂಗಳೂರಿನ ಹೆಗ್ಗಳಿಕೆಯ ಬಗ್ಗೆ ತಿಳಿಯುವ ಪ್ರಯತ್ನ ನಡೆಸಿದ್ದರೆ ಈ ರೀತಿಯ ಅಪ್ರಬುದ್ಧ ಹೇಳಿಕೆ ನೀಡುತ್ತಿರಲಿಲ್ಲ ಎಂದು ಕುಟುಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.