ಬೆಂಗಳೂರು: ‘ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಕೆಲ ಹಿಂದುತ್ವವಾದಿಗಳು ‘ಹಿಂದೂರಾಷ್ಟ್ರ ಸಂವಿಧಾನ’ ರೂಪಿಸಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ. ಇದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧ. ಅಂತವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದು ಸೌಹಾರ್ದ ಕರ್ನಾಟಕ ಸಂಘಟನೆಯ ಪ್ರೊ.ಆರ್.ಕೆ.ಹುಡಗಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಬಹಿರಂಗ ಪತ್ರ ಬರೆದಿರುವ ಸೌಹಾರ್ದ ಕರ್ನಾಟಕದ ಸದಸ್ಯರು, ‘ಮನುಸ್ಮೃತಿ ಮತ್ತು ಚಾಣಕ್ಯನ ಅರ್ಥಶಾಸ್ತ್ರದಲ್ಲಿನ ಅಂಶಗಳನ್ನು ಆಧರಿಸಿ 501 ಪುಟಗಳ ಹಿಂದೂ ಸಂವಿಧಾನ ರಚಿಸಿದ್ದು, ಫೆಬ್ರುವರಿ 3ರಂದು ಬಹಿರಂಗಗೊಳಿಸುತ್ತೇವೆ ಎಂದು ಮೂಲಭೂತವಾದಿಗಳು ಹೇಳಿದ್ದಾರೆ. ಇದು ದೇಶ ವಿರೋಧಿ ಚಟುವಟಿಕೆ. ಇಂಥವರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಮೀನಾಕ್ಷಿ ಬಾಳಿ, ನೀಲಾ ಕೆ., ಮಾರುತಿ ಗೋಖಲೆ, ಲವಿತ್ರ ವಸ್ತ್ರದ ಸೇರಿ 14 ಮಂದಿ ಲೇಖಕರು, ವಿಮರ್ಶಕರು ಮತ್ತು ಸಾಮಾಜಿಕ ಕಾರ್ಯಕರ್ತರು ಪತ್ರಕ್ಕೆ ಸಹಿ ಮಾಡಿದ್ದಾರೆ. ‘ಇದು ದೇಶದ ಬಹುತ್ವ ಮತ್ತು ಪ್ರಜಾಪ್ರಭುತ್ವವನ್ನು ನಾಶ ಮಾಡುವ ಯತ್ನ. ಆ ಮೂಲಕ ದೇಶದಲ್ಲಿ ಸರ್ವಾಧಿಕಾರವನ್ನು ಜಾರಿಗೆ ತರುವ ಹುನ್ನಾರ. ಇದಕ್ಕೆ ತಕ್ಷಣವೇ ತಡೆ ಒಡ್ಡಬೇಕು’ ಎಂದು ಆಗ್ರಹಿಸಿದ್ದಾರೆ.
‘ಇಂತಹ ಕೃತ್ಯದ ವಿರುದ್ಧ ಸರ್ಕಾರವು ಕ್ರಮ ತೆಗೆದುಕೊಳ್ಳಬೇಕು. ಇಲ್ಲದೇ ಇದ್ದಲ್ಲಿ, ಅಂತಹ ಸರ್ಕಾರದ ವಿರುದ್ಧವೂ ಹೋರಾಟ ನಡೆಸಬೇಕಾಗುತ್ತದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.