ADVERTISEMENT

ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಲಿ –ಸೋನಿಯಾ ಗಾಂಧಿಗೆ ಸಿದ್ದರಾಮಯ್ಯ ಪತ್ರ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 10:08 IST
Last Updated 24 ಆಗಸ್ಟ್ 2020, 10:08 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಅನಾರೋಗ್ಯದ ಕಾರಣದಿಂದ ಪಕ್ಷವನ್ನು ಮುನ್ನಡೆಸಲು ನಿಮಗೆ ಸಾಧ್ಯವಾಗದೆ ಇದ್ದರೆ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿ’ ಎಂದು ಆಗ್ರಹಿಸಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ.

‘ಪಕ್ಷ ಸಂಕಷ್ಟದ ಸನ್ನಿವೇಶದಲ್ಲಿ ಸಿಲುಕಿಕೊಂಡಿರುವುದು ಇದೇ ಮೊದಲೇನೂ ಅಲ್ಲ. ಪ್ರತಿ ಬಾರಿ ಪಕ್ಷ ಇಂಥ ಸನ್ನಿವೇಶಗಳನ್ನು ಎದುರಿಸಿ, ಮೀರಿ ಬೆಳೆದಿದೆ. ಗಾಂಧಿ ಕುಟುಂಬ ಇಂಥ ಸಂಕಷ್ಟದ ಅವಧಿಯಲ್ಲಿ ಪಕ್ಷವನ್ನು ಮುನ್ನಡೆಸಿದೆ’ ಎಂದು ಪತ್ರದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

‘1977ರಲ್ಲಿ ಇಂದಿರಾ ಗಾಂಧಿ ಸೋಲು ಕಂಡಾಗ ಗಾಂಧಿ ಕುಟುಂಬವನ್ನು ಗುರಿ ಮಾಡಲಾಗಿತ್ತು. ಆದರೆ, ಅದನ್ನು ಸವಾಲಾಗಿ ಸ್ವೀಕರಿಸಿದ ಇಂದಿರಾ ಗಾಂಧಿ, ಪಕ್ಷವನ್ನು ಮತ್ತೆ ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು. ರಾಜೀವ್ ಗಾಂಧಿ ಹತ್ಯೆಯ ಬಳಿಕ ಕಾಂಗ್ರೆಸ್‌ನಲ್ಲಿ ನಾಯಕತ್ವದ ಪ್ರಶ್ನೆ ಎದುರಾಗಿತ್ತು. ಅಂಥ ಸಂಕಷ್ಟದ ಸಂದರ್ಭದಲ್ಲಿ ಪಕ್ಷದ ನಾಯಕತ್ವ ವಹಿಸಿಕೊಂಡು ನೀವು ಜವಾಬ್ದಾರಿ ನಿಭಾಯಿಸಿದ್ದೀರಿ. 1998ರಿಂದ 2004 ರವರೆಗೆ ಪಕ್ಷವನ್ನು ಸಮರ್ಥವಾಗಿ ನಿಭಾಯಿಸಿದ್ದೀರಿ. 2004ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಅವಕಾಶ ಇದ್ದರೂ ಪ್ರಧಾನಿ ಹುದ್ದೆ ನಿರಾಕರಿಸಿದ್ದೀರಿ’ ಎಂದೂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದೀರಿ.

ADVERTISEMENT

‘ಪಕ್ಷಕ್ಕೆ 1977, 1998ರ ಪರಿಸ್ಥಿತಿ ಮತ್ತೊಮ್ಮೆ ಎದುರಾಗಿದೆ. ಕೇವಲ ಪಕ್ಷ ಮಾತ್ರವಲ್ಲ ದೇಶವೇ ಸಂಕಷ್ಟದಲ್ಲಿದೆ. ದೇಶದ ಅಘೋಷಿತ ತುರ್ತು ಪರಿಸ್ಥಿತಿಯಲ್ಲಿದೆ. ಇಂಥ ಸಂದರ್ಭದಲ್ಲಿ ವಿರೋಧ ಪಕ್ಷವಾಗಿ ಆಡಳಿತ ಪಕ್ಷವನ್ನು ಎದುರಿಸಲು ನಾವು ಸಮರ್ಥವಾಗಿರಬೇಕು. ಪಕ್ಷದಲ್ಲಿ ಒಗ್ಗಟ್ಟು ಇರಬೇಕು. ಗಾಂಧಿ ಕುಟುಂಬ ಪಕ್ಷವನ್ನು ಮುನ್ನಡೆಸಿದಾಗ ಮಾತ್ರ ಇದು ಸಾಧ್ಯ’ ಎಂದೂ ಪತ್ರದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

‘ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ನೀವೇ ಮುಂದುವರಿಯಬೇಕು. ಒಂದು ವೇಳೆ ಅನಾರೋಗ್ಯ ಕಾರಣಕ್ಕೆ ಸಾಧ್ಯವಿಲ್ಲ ಎಂದಾದರೆ, ರಾಹುಲ್ ಗಾಂಧಿ ಆ ಹೊಣೆಯನ್ನು ಹೊರಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.