ಬೆಳಗಾವಿ: ನಗರವೂ ಸೇರಿದಂತೆ ತಾಲ್ಲೂಕು ಹಾಗೂ ಹುಕ್ಕೇರಿ ತಾಲ್ಲೂಕಿನಲ್ಲಿ ಗುರುವಾರ ಮುಂಜಾನೆ ಗಂಟೆಗೂ ಹೆಚ್ಚಿನ ಸಮಯ ಗುಡುಗು– ಸಿಡಿಲು ಸಮೇತ ಸಾಧಾರಣ ಮಳೆಯಾಯಿತು. ಬಿಸಿಲಿನ ಝಳದಿಂದ ಬಸವಳಿದಿದ್ದ ಮನಗಳಿಗೆ ತಂಪೆರೆಯಿತು.
ಇದು ನಗರದಲ್ಲಿ ಸುರಿದ ಮೊದಲ ಮುಂಗಾರು ಪೂರ್ವ ಮಳೆಯಾಗಿದೆ. ಇಲ್ಲಿ ಸಾಮಾನ್ಯವಾಗಿ ಮೇ 2ನೇ ವಾರದಲ್ಲಿ ಅಡ್ಡಮಳೆ (ಮುಂಗಾರು ಪೂರ್ವ) ಮಳೆ ಆರಂಭವಾಗುವುದು ವಾಡಿಕೆ. ಕೃಷಿ ಚಟುವಟಿಕೆಗಳೂ ಚುರುಕುಗೊಳ್ಳುತ್ತಿದ್ದವು. ಆದರೆ, ಈ ಬಾರಿ ಮಳೆ ಸಂಪೂರ್ಣ ಕೈಕೊಟ್ಟಿದೆ. ಮುಂಗಾರು ಪೂರ್ವ ಅವಧಿಯಲ್ಲಿ ಶೇ 96ರಷ್ಟು ಮಳೆ ಕೊರತೆಯಾಗಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು. ಗುರುವಾರ ಬಿದ್ದ ಮಳೆ ಉತ್ತಮ ಮುಂಗಾರಿನ ಆಶಾಭಾವ ಮೂಡಿಸಿದೆ.
ನಗರದ ಹಳೆಯ ಪುಣೆ–ಬೆಂಗಳೂರು ರಸ್ತೆಯ ಮೇಲ್ಸೇತುವೆ ಸಮೀಪ ಚರಂಡಿ ಸ್ವಚ್ಛಗೊಳಿಸದೇ ಇರುವುದರಿಂದ ಮಳೆ ನೀರು ರಸ್ತೆಯಲ್ಲಿಯೇ ನಾಲೆಯಂತೆ ಹರಿಯಿತು. ಇದರಿಂದ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು.
ಮಳೆಯಿಂದಾಗಿ, ಹುಕ್ಕೇರಿ ತಾಲ್ಲೂಕು ಅರಳಿಕಟ್ಟಿ ಗ್ರಾಮದಲ್ಲಿ ದನದ ಕೊಟ್ಟಿಗೆಯ ಗೋಡೆ ಕುಸಿದು ಯಲ್ಲಪ್ಪ ಬಡಕುರೆ (60) ಎನ್ನುವವರು ಮೃತಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.