ಶಿವಮೊಗ್ಗ:ತುಂಗಾ ನದಿ ನೀರುಶಿವಮೊಗ್ಗ ನಗರ, ತೀರ್ಥಹಳ್ಳಿ ತಾಲ್ಲೂಕಿನ ಹಲವು ಬಡಾವಣೆ, ಗ್ರಾಮಗಳಿಗೆ ನುಗ್ಗಿದೆ.
ಹೊಳೆಹೊನ್ನೂರು ರಸ್ತೆಯ ಶಾಂತಮ್ಮ ಲೇಔಟ್, ಚಿಕ್ಕಲ್, ಗುರುಪುರ, ಜೋಸೆಫ್ನಗರ, ವಿದ್ಯಾನಗರದ ಕೆಲೆವು ತಿರುವುಗಳಿಗೆ ನೀರು ನುಗ್ಗಿದೆ. 54 ಕುಟುಂಬಗಳನ್ನು ನೆರೆ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 5 ಪರಿಹಾರ ಕೇಂದ್ರ ತೆರೆಯಲಾಗಿದೆ.
ಇಮಾಂಬಾಡ, ರಾಮಣ್ಣ ಶ್ರೇಷ್ಟಿ ಪಾರ್ಕ್, ಕುಂಬಾರಗುಂಡಿ ಪ್ರದೇಶದ ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಒಟ್ಟು 1,200 ಜನರಿಗೆ ಆಶ್ರಯ ನೀಡಲಾಗಿದೆ. ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಅಗತ್ಯ ಅಡುಗೆ ಸಾಮಾಗ್ರಿಗಳನ್ನು ಒಳಗೊಂಡ 2 ಸಾವಿರ ಆಹಾರ ಕಿಟ್ ವಿತರಿಸಲಾಗುತ್ತಿದೆ.
ಸಂಚಾರ ಬಂದ್: ಹೊಳೆಹೊನ್ನೂರು ಮಾರ್ಗದಲ್ಲಿನ ಬಸ್ ಸಂಚಾರ ರದ್ದು ಮಾಡಲಾಗಿದೆ. ಚನ್ನಗಿರಿ, ಚಿತ್ರದುರ್ಗಕ್ಕೆ ಹೋಗುವ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದೆ. ಹೊಸನಗರ ತಾಲ್ಲೂಕು ಕಾರಣಗಿರಿ ಬಳಿ ರಸ್ತೆ ಕುಸಿದ ಪರಿಣಾಮ ಬೈಂದೂರು–ರಾಣೇಬೆನ್ನೂರು ರಾಷ್ಟ್ರೀಯ ಹೆದ್ದಾರಿ ಸಂಚಾರದಲ್ಲಿ ವ್ಯತ್ಯಯವಾಗಿದೆ. ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ತೀರ್ಥಹಳ್ಳಿ ಸಮೀಪದ ಭಾರತಿಪುರ ಸಮೀಪ ಗುಡ್ಡ ಕುಸಿಯುತ್ತಿದೆ. ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾರ್ಗದಲ್ಲಿ ಸಂಚರಿಸುವ ರೈಲುಗಳ ವೇಗವನ್ನು ಗಣನೀಯವಾಗಿ ತಗ್ಗಿಸಲಾಗಿದೆ.
ವಿಶ್ವ ಪ್ರಸಿದ್ಧ ಜೋಗ ಜಲಪಾತದ ಬ್ರಿಟಿಷ್ ಬಂಗಲೆ ಕೆಳಭಾಗದ ಬೆಟ್ಟ ಜರುಗುತ್ತಿದೆ. ಇದರಿಂದ ಬಂಗಲೆ ಕುಸಿಯುವ ಅಪಾಯ ಎದುರಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.