ADVERTISEMENT

‘ರೈತ ವಾಸ್ತವ್ಯ’ಕ್ಕೆ ಕೃಷಿ ಸಚಿವ ಬಿಸಿ ಪಾಟೀಲ್‌ ಚಿಂತನೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 18:45 IST
Last Updated 6 ಸೆಪ್ಟೆಂಬರ್ 2020, 18:45 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಬೆಂಗಳೂರು: ರೈತರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಪರಿಹಾರ ಕಂಡುಕೊಳ್ಳಲು ಮತ್ತು ಪ್ರಗತಿಪರ ರೈತರ ಸಾಧನೆಗಳನ್ನು ಇತರರಿಗೂ ಪ್ರೇರಣೆಯಾಗಿಸುವ ಉದ್ದೇಶದಿಂದ ‘ರೈತ ವಾಸ್ತವ್ಯ’ ಕಾರ್ಯಕ್ರಮ ಹಮ್ಮಿಕೊಳ್ಳಲು ಕೃಷಿ ಸಚಿವ ಬಿ.ಸಿ. ಪಾಟೀಲ ಮುಂದಾಗಿದ್ದಾರೆ.

‘ಇಂಥದ್ದೊಂದು ಕಾರ್ಯಕ್ರಮಕ್ಕೆ ಸಚಿವರು ಈ ಹಿಂದೆಯೇ ಚಿಂತನೆ ನಡೆಸಿದ್ದರು. ಚಾಮರಾಜನಗರ ಜಿಲ್ಲೆಯ ರೈತರೊಬ್ಬರ ಮನೆಯಲ್ಲಿ ವಾಸ್ತವ್ಯ ಹೂಡಿ, ಸಮಸ್ಯೆಗಳಿಗೆ ಧ್ವನಿಯಾಗಲು ನಿರ್ಧರಿಸಿದ್ದರು. ಆದರೆ, ಕೋವಿಡ್‌ನಿಂದಾಗಿ ಯೋಜನೆ ಯನ್ನು ಕಾರ್ಯಗತಗೊಳಿ‌ಸಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಈ ಬಗ್ಗೆ ಚಿಂತನೆ ನಡೆಸಿದ್ದಾರೆ’ ಎಂದು ಸಚಿವರ ಆಪ್ತ ಮೂಲಗಳು ತಿಳಿಸಿವೆ.

ಸಚಿವರು ಇಲಾಖೆಯ ಅಧಿಕಾರಿಗಳೊಂದಿಗೆ ರೈತರ ಮನೆಗಳಿಗೆ ತೆರಳಿ, ಅಲ್ಲೇ ವಾಸ್ತವ್ಯ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ರೈತನ ಕುಟುಂಬ ಮತ್ತು ಸುತ್ತಲಿನ ರೈತರ ಜತೆಗೆ ಕಾಲ ಕಳೆಯುವ ಮೂಲಕ ಕೃಷಿ ವಿಚಾರಗಳ ಬಗ್ಗೆ ಚರ್ಚಿಸುವುದು ಕಾರ್ಯಕ್ರಮದ ಉದ್ದೇಶ.

ADVERTISEMENT

ಆ ಮೂಲಕ, ಕೃಷಿ ಉತ್ಪನ್ನಗಳ ಇಳುವರಿ ಹೆಚ್ಚಿಸುವುದು, ಉತ್ತಮ ಬೆಲೆ ಸಿಗುವಂತೆ ಮಾಡಲು ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಲಹೆ ಸೂಚನೆಗಳನ್ನು ಪಡೆಯಲಿದ್ದಾರೆ. ಕೊರೊನಾ ಸೋಂಕು ಕಡಿಮೆಯಾದ ಬಳಿಕ ರೈತ ವಾಸ್ತವ್ಯದ ರೂಪುರೇಷೆ ಮತ್ತು ದಿನಾಂಕವೂ ನಿಗದಿಯಾಗಲಿದೆ ಎಂದೂ ಮೂಲಗಳುಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.