ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಇದೇ ಶನಿವಾರ–ಭಾನುವಾರ ‘ಕನ್ನಡ ವೈದ್ಯಕೀಯ ಸಾಹಿತ್ಯ ಸಮ್ಮೇಳನ’ವನ್ನು ಆನ್ಲೈನ್ ವೇದಿಕೆಯಲ್ಲಿ ಹಮ್ಮಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್. ಸಚ್ಚಿದಾನಂದ, ‘ಇದೇ ಮೊದಲ ಬಾರಿಗೆ ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ‘ವೈದ್ಯ ವಿಜ್ಞಾನ ಅಂದು, ಇಂದು, ಮುಂದು’ ಎಂಬ ಶೀರ್ಷಿಕೆಯಡಿ ಸಮ್ಮೇಳನ ನಡೆಯಲಿದೆ. ಸಮ್ಮೇಳನಾಧ್ಯಕ್ಷರಾಗಿ ಕಲಬುರ್ಗಿಯ ಕೆಬಿಎನ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ಎಸ್. ಶಂಕರ್ ಆಯ್ಕೆಯಾಗಿದ್ದಾರೆ. ರಜತ ಮಹೋತ್ಸವದ ಪ್ರಯುಕ್ತ ಆಯೋಜಿಸುತ್ತಿರುವ ಈ ಸಮ್ಮೇಳನವು ವೈದ್ಯಕೀಯ ಲೋಕದ ಆಗುಹೋಗುಗಳನ್ನು ಅನಾವರಣ ಮಾಡುವ ಜತೆಗೆ ಕನ್ನಡ ವೈದ್ಯಕೀಯ ಸಾಹಿತ್ಯದ ಬೆಳವಣಿಗೆಗೆ ನೆರವಾಗಲಿದೆ’ ಎಂದರು.
‘ಶನಿವಾರ ಮಧ್ಯಾಹ್ನ 12 ಗಂಟೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಭಾನುವಾರ ಬೆಳಿಗ್ಗೆ 9 ಗಂಟೆಯಿಂದಲೇ ಗೋಷ್ಠಿಗಳು ಪ್ರಾರಂಭವಾಗಲಿವೆ. ಭವಿಷ್ಯದ ವೈದ್ಯಚಿಕಿತ್ಸೆ, ಕೋವಿಡ್ ಅಲೆ, ಅಂಗ ಕಸಿ, ಆರೋಗ್ಯ ಸುಧಾರಣೆಗೆ ವಿವಿಧ ವೈದ್ಯ ಪದ್ಧತಿಗಳ ಕೊಡುಗೆ ಸೇರಿದಂತೆ ವಿವಿಧ ವಿಷಯಗಳ ಗೋಷ್ಠಿಗಳು ನಡೆಯಲಿವೆ’ ಎಂದು ತಿಳಿಸಿದರು.
‘ಕೋವಿಡ್ ಬಗೆಗಿನ ಗೋಷ್ಠಿಯಲ್ಲಿ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್, ಸದಸ್ಯರಾದ ಡಾ.ಸಿ.ಎನ್. ಮಂಜುನಾಥ್, ಡಾ. ಗಿರಿಧರ ಬಾಬು ಪಾಲ್ಗೊಳ್ಳಲಿದ್ದಾರೆ. ಕನ್ನಡದ ವೈದ್ಯಕೀಯ ಸಾಹಿತ್ಯಕ್ಕೆ ಕೊಡುಗೆ ನೀಡುತ್ತಿರುವ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ನಾ. ಸೋಮೇಶ್ವರ, ಡಾ. ವೀಣಾ ಭಟ್, ಡಾ.ಸಿ.ಆರ್. ಚಂದ್ರಶೇಖರ್, ಡಾ. ಪದ್ಮಿನಿ ಪ್ರಸಾದ್, ಡಾ. ಆಶಾ ಬೆನಕಪ್ಪ, ಡಾ.ಬಿ.ಟಿ. ರುದ್ರೇಶ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ’ ಎಂದರು.
ಸಮ್ಮೇಳನದ ವಿಶೇಷತೆ
* ವರ್ಚುವಲ್ ಮಾದರಿಯಲ್ಲಿ ಸಮ್ಮೇಳನ
* 10 ಗೋಷ್ಠಿಗಳ ಆಯೋಜನೆ
* 24 ಕವಿಗಳಿಂದ ಕವನ ವಾಚನ
* 60 ವೈದ್ಯರು ಗೋಷ್ಠಿಗಳಲ್ಲಿ ಭಾಗವಹಿಸುವಿಕೆ
* ಏಕಕಾಲದಲ್ಲಿ 3 ಸಾವಿರ ಮಂದಿ ವೀಕ್ಷಣೆ ನಿರೀಕ್ಷೆ
ಆನ್ಲೈನ್ ವೀಕ್ಷಣೆ ಲಿಂಕ್ಗಳು: https://www.facebook.com/VCRGUHS/live/ (ಫೇಸ್ಬುಕ್)
https://youtu.be/XKilQ3t8PPQ (ಯು ಟ್ಯೂಬ್)
https://youtu.be/PQN1mP6a2wc
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.