ADVERTISEMENT

ರಾಜ್ ಪ್ರತಿಮೆಗೆ ಅವಹೇಳನ : ಆರೋಪ ನಿರಾಕರಿಸಿದ ಹ್ಯಾರಿಸ್‌

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 7:45 IST
Last Updated 18 ಫೆಬ್ರುವರಿ 2021, 7:45 IST
   

ಬೆಂಗಳೂರು: ನಟ ರಾಜ್‌ಕುಮಾರ್ ಪ್ರತಿಮೆ ವಿಷಯದಲ್ಲಿ ಅವಹೇಳನಕಾರಿ ಧಾಟಿಯಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಹ್ಯಾರಿಸ್‌, ‘ನಾನು ರಾಜಕುಮಾರ್ ಅಭಿಮಾನಿ. ಅವಹೇಳನಕಾರಿಯಾಗಿ ಮಾತನಾಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಬೆಂಬಲಿಗರ ಸಮ್ಮುಖದಲ್ಲಿ ಮಾತನಾಡಿರುವ ಹ್ಯಾರಿಸ್‌, ‘ಪ್ರತಿಮೆಗಳನ್ನು ಇಡುವುದೇ ದೊಡ್ಡ ಕತೆ, ಅದರಲ್ಲಿ ಆಫೀಸ್ ಬೇರೆ ಮಾಡಿಕೊಡುವುದಕ್ಕೆ ಆಗುತ್ತಾ? ಮೇಲೆ ಪ್ರೊಟೆಕ್ಷನ್ ಏನ್ ಬೇಕಾಗಿಲ್ಲ. ಓಪನ್ ಇಡಿ. ಅವರು ಯಾರೋ ರಾಜ್ ಕುಮಾರ್‌ಗೆ ಅಂತ ಮಾಡಿರ್ತಾರೆ, ಅದನ್ನು ತೆಗಿಬೇಕು. ಸ್ಟ್ಯಾಚ್ಯುಗಳನ್ನೆಲ್ಲಾ ಕವರ್ ಮಾಡಿ ಮನೆಯಲ್ಲಿ ಇಟ್ಟಿದ್ರೆ ಆಗಿರ್ತಿತ್ತು, ರೋಡಲ್ಲಿ ಯಾಕೆ ಇಡ್ತಾರೆ ಅಲ್ವಾ? ಯಾರ್ ಕೇಳಿರುವವರು? ಏನಾದ್ರು ಹೇಳಿದ್ರೆ ಬೇರೆ ರೀತಿಯಲ್ಲಿ ತೆಗೆದುಕೊಳ್ಳುತ್ತಾರೆ’ ಎಂದು ಮಾತನಾಡಿರುವ ವಿಡಿಯೊ ಹರಿದಾಡುತ್ತಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಹ್ಯಾರಿಸ್‌, ‘ನಾನು ಅಲ್ಲಿ ಮಾತನಾಡಿದ ಸಂಪೂರ್ಣ ವಿಡಿಯೊ ಫೇಸ್‌ಬುಕ್‌ನಲ್ಲಿ ಲಭ್ಯವಿದೆ. ಅದನ್ನು ಪೂರ್ತಿ ವೀಕ್ಷಿಸಿದರೆ ಅರ್ಥವಾಗುತ್ತದೆ. ಅಲ್ಲಿ ನಾನು ನೀಡಿದ್ದು ಸಲಹೆ ಮಾತ್ರ’ ಎಂದರು.

ADVERTISEMENT

‘ದೊಮ್ಮಲೂರು ಭಾಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯ ವೀಕ್ಷಣೆಗೆ ತೆರಳಿದ್ದ ಸಂದರ್ಭ ವಿಡಿಯೊ ತೆಗೆಯಲಾಗಿದೆ. ರಾಜ್‌ಕುಮಾರ್ ಪ್ರತಿಮೆ ಮೇಲ್ಭಾಗದಲ್ಲಿ ಬೇರೆ ವಸ್ತುಗಳನ್ನು ಇಟ್ಟು ಮುಚ್ಚಲಾಗಿದೆ. ಅದನ್ನು ತೆರವುಗೊಳಿಸಿ ಪ್ರತಿಮೆ ಕಾಣುವಂತೆ ಮಾಡಿ ಎಂದು ಸಲಹೆ ನೀಡಿದ್ದೇನೆ. ಪ್ರತಿಮೆ ಸ್ಥಾಪಿಸಿದ ಮೇಲೆ ಅದನ್ನು ಮುಚ್ಚಿಡುವುದು ಎಷ್ಟು ಸರಿ? ಪ್ರತಿಮೆ ಇಟ್ಟ ಮೇಲೆ ಎಲ್ಲರಿಗೂ ಗೋಚರಿಸುವಂತೆ ಇಡಬೇಕು ಎಂದಿದ್ದೇನೆ ಅಷ್ಟೆ. ಆದರೆ, ಉದ್ದೇಶಪೂರ್ವಕವಾಗಿ ಕಟ್ ಅಂಡ್ ಪೇಸ್ಟ್ ಮಾಡಿ ವಿಡಿಯೊ ವೈರಲ್ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.