ಬೆಳಗಾವಿ: ‘ಗೋಕಾಕದ ಶಾಸಕ ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾಗಬಹುದು’ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ತಿಳಿಸಿದರು.
ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಮೇಶ ಅವರು ಸಚಿವರಾದರೆ ನಮ್ಮ ಕ್ಷೇತ್ರದ ಜನರ ಸ್ವಾರ್ಥವೂ ಇದೆ. ಕ್ಷೇತ್ರದಲ್ಲಿ ಆಗಬೇಕಿರುವ ಹಲವು ಕೆಲಸಗಳಿಗೆ ನೆರವು ಪಡೆಯಬೇಕಾಗಿದೆ. ಅವರೊಂದಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಶ್ರೀಮಂತ ಪಾಟೀಲರ ಸಹಕಾರದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.
‘ಕಕಮರಿ, ಕೊಟ್ಟಲಗಿ ನೀರಾವರಿ ಮಾಡಬೇಕಾಗಿದೆ. ಅದಕ್ಕೆ ₹ 250ರಿಂದ ₹ 300 ಕೋಟಿ ಬೇಕಾಗುತ್ತದೆ. ಹಿಪ್ಪರಗಿ ಅಣೆಕಟ್ಟೆಯಿಂದ ಬಾಧಿತವಾದ 70ಸಾವಿರ ಎಕರೆ ಸಂಪೂರ್ಣವಾಗಿ ಸವಳು–ಜವಳಾಗಿದೆ. ಆ ಪ್ರದೇಶದ ಸಮಸ್ಯೆಯನ್ನು ನಿವಾರಿಸಬೇಕಾಗಿದೆ. ಅದಕ್ಕೂ ₹ 300ರಿಂದ ₹ 400 ಕೋಟಿ ಅನುದಾನ ಬೇಕಾಗುತ್ತದೆ. ಕೃಷ್ಣಾ ನದಿಗೆ ಬಾಂದಾರ ಕಟ್ಟಬೇಕಾಗಿದೆ. ಮುಳುಗಡೆ ಪ್ರದೇಶಗಳ ಸ್ಥಳಾಂತರಕ್ಕೆ ಕ್ರಮ ವಹಿಸಬೇಕಾಗಿದೆ. ಕೃಷ್ಣಾ ನದಿಯಿಂದ ಬಾಧಿತವಾಗಿರುವ 22 ಹಳ್ಳಿಗಳ ಜನರಿಗೆ ಪರಿಹಾರ ಕೊಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಶ್ರಮಿಸಲಾಗುವುದು’ ಎಂದು ಹೇಳಿದರು.
‘ನನ್ನ ಗೆಲುವಿನ ಸಂಪೂರ್ಣ ಶ್ರೇಯಸ್ಸು ಕ್ಷೇತ್ರದ ಮತದಾರರಿಗೆ ಸಲ್ಲಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.