ADVERTISEMENT

ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ₹ 5 ಕೋಟಿ ಡೀಲ್‌ ನಡೆದಿದೆ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 2:08 IST
Last Updated 6 ಮಾರ್ಚ್ 2021, 2:08 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಮೈಸೂರು: ‘ನನಗೆ ಲಭಿಸಿರುವ ಮಾಹಿತಿ ಪ್ರಕಾರ ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ₹5 ಕೋಟಿ ಡೀಲ್‌ ನಡೆದಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

‘ಈ ಪ್ರಕರಣದ ಹಿಂದೆ ದೊಡ್ಡವರ ಕೈವಾಡವಿದೆ. ಸಂತ್ರಸ್ತೆ ಎಲ್ಲಿದ್ದಾಳೆ ಎಂಬುದನ್ನು ಹುಡುಕುವ ಬದಲು, ದೂರು ನೀಡಿದ ದಿನೇಶ್‌ ಕಲ್ಲಹಳ್ಳಿಯನ್ನು ಬಂಧಿಸಬೇಕು. ಇನ್ನಷ್ಟು ಸಿ.ಡಿಗಳಿವೆ ಎಂದು ಹೇಳುವ ಆತನನ್ನು ವಿಚಾರಣೆಗೆ ಒಳಪಡಿಸಿದರೆ ಇಡೀ ಪ್ರಕರಣದ ಸತ್ಯಾಂಶ ಹೊರಬರಲಿದೆ’ ಎಂದು ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮದವರಿಗೆ ತಿಳಿಸಿದರು.

‘ಸಿ.ಡಿ. ಮುಂದಿಟ್ಟು ಮೂರು ತಿಂಗಳ ಹಿಂದೆಯೇ ದುಡ್ಡಿನ ವ್ಯವಹಾರ ನಡೆದಿದೆ. ದಿನೇಶ್‌ ಒಂದು ತಂಡವನ್ನು ಕಟ್ಟಿಕೊಂಡು ದುಡ್ಡು ಮಾಡುತ್ತಿದ್ದಾನೆ. ಆತನ ಬಳಿ ಸಿ.ಡಿ ಎಲ್ಲಿಂದ ಬಂತು ಎಂಬುದರ ತನಿಖೆಯಾಗಲಿ’ ಎಂದು ಆಗ್ರಹಿಸಿದರು.

ADVERTISEMENT

‘ನಾನು ಈ ಪ್ರಕರಣ ನೋಡಿ ಖುಷಿ ಪಡುವವನಲ್ಲ. ಇಂತಹ ಬೆಳವಣಿಗೆಗಳಿಂದ ಸಮಾಜದಲ್ಲಿ ಹೇಸಿಗೆ ಹುಟ್ಟಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಸಚಿವನನ್ನು ರಾಜೀನಾಮೆ ಕೊಡಿಸಬೇಕೆಂಬ ಅವರ ಉದ್ದೇಶ ಈಡೇರಿದೆ. ಇಂತಹ ವಿಚಾರದಲ್ಲಿ ಸುಮ್ಮನೆ ಕಲ್ಲು ಹೊಡೆಯಬಾರದು’ ಎಂದರು.

‘ರಾಜಕಾರಣಿಗಳ ಸಿಡಿ ಇದೆ ಎನ್ನುವವರನ್ನು ಮೊದಲು ಒದ್ದು ಒಳಗೆ ಹಾಕಬೇಕು. ಅಂತವರನ್ನು ಬಂಧಿಸಿ ಅವರ ಬಳಿ ಇರುವ ಸಿ.ಡಿಗಳನ್ನು ಸರ್ಕಾರವೇ ಜನರ ಮುಂದೆ ಬಿಡುಗಡೆ ಮಾಡಲಿ. ಸಿ.ಡಿ ಹೆಸರಿನಲ್ಲಿ ನಡೆಯುವ ಬ್ಲ್ಯಾಕ್‌ಮೇಲ್‌ಗಳು ನಿಲ್ಲಬೇಕು ಎಂಬುದು ನನ್ನ ಉದ್ದೇಶ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.