ಶ್ರೀರಂಗಪಟ್ಟಣ: ರಂಗನತಿಟ್ಚು ಪಕ್ಷಿಧಾಮದಲ್ಲಿ ಒಣಗಿರುವ, ಬಾಗಿ ಅಪಾಯ ತಂದೊಡ್ಡಬಹುದಾದ ಬಿದಿರು ತೆರವು ಕಾರ್ಯಕ್ಕೆ ಅರಣ್ಯ ಇಲಾಖೆ (ವನ್ಯಜೀವಿ ವಿಭಾಗ) ಮುಂದಾಗಿದೆ.
‘ಮೂರು ದಿನಗಳಿಂದ ಇಂಥ ಮರಗಳನ್ನು ಕಡಿಯುವ ಕಾರ್ಯ ನಡೆದಿದೆ. ಒಣಗಿದ, ವಿದ್ಯುತ್ ತಂತಿಗಳಿಗೆ ತಾಕುತ್ತಿದ್ದ ಹಾಗೂ ಬಾಗಿರುವ 3000 ಬಿದಿರು ಕಡಿಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಮ್ಮತಿಸಿದ್ದಾರೆ’ ಎಂದು ಪಕ್ಷಿಧಾಮದ ಉಪವಲಯ ಅರಣ್ಯಾಧಿಕಾರಿ ಪುಟ್ಟಮಾದೇಗೌಡ ತಿಳಿಸಿದ್ದಾರೆ.
ಪಕ್ಷಿಗಳು ಗೂಡು ಕಟ್ಟುವ ತಾಣದಿಂದ ಸಾಕಷ್ಟು ದೂರವಿರುವ, ಪಾದಚಾರಿ ಮಾರ್ಗದಲ್ಲಿ, ಜನರ ವಿಶ್ರಾಂತಿ ಸ್ಥಳದಲ್ಲಿರುವ ಮರಗಳನ್ನು ಮಾತ್ರ ತೆಗೆಯಲಾಗುತ್ತಿದೆ. ಬಿದಿರು ತೆಗೆಯುವಾಗ ಪಕ್ಷಿಗಳು ಗೂಡು ಕಟ್ಟಿವೆಯೇ ಎಂದು ಪರಿಶೀಲಿಸಿ ಪಕ್ಷಿ ಸಂಕುಲಕ್ಕೆ ಅಪಾಯ ಇಲ್ಲ ಎಂಬುದನ್ನು ಖಾತರಿಪಡಿಸಿಕೊಂಡೇ ಕತ್ತರಿಸಲಾಗುತ್ತಿದೆ ಎಂದರು.
ಪಕ್ಷಿಧಾಮದ ವ್ಯಾಪ್ತಿ ಪ್ರದೇಶವನ್ನು 1940ರಲ್ಲಿ ನೋಟಿಫೈ ಪ್ರದೇಶವೆಂದು ಘೋಷಿಸಲಾಗಿದೆ. ಆ ನಂತರ ಬಿದಿರು, ಇತರ ಮರಗಳನ್ನು ನೆಟ್ಟು ಬೆಳೆಸಲಾಗಿದೆ. ಇದರಲ್ಲಿ 45 ವರ್ಷ ಮೀರಿದ ಕೆಲವು ಬಿದಿರುಗಳು ಹೂ ಬಿಟ್ಟು ಒಣಗಿವೆ. ಪಕ್ಷಿ ವೀಕ್ಷಣೆಗೆ ಬರುವವರ ಮೇಲೆ ಬೀಳುವ ಅಪಾಯದ ವಿಚಾರವನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ಮೇದರಿಗೆ ಮಾರಾಟ
ಕಡಿದ ಬಿದಿರನ್ನು ಬುಟ್ಟಿ ಹೆಣೆದು ಬದುಕುವ ಮೇದರ ಜನಾಂಗವರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಬಿದಿರು ಕಡಿಯಲು ತಮಿಳುನಾಡಿನಿಂದ ಕಾರ್ಮಿಕರನ್ನು ಕರೆಸಿದ್ದು, ತಿಂಗಳಾಂತ್ಯಕ್ಕೆ ಮುಗಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
18 ಅಡಿ ಒಳಗಿರುವ ಪ್ರತಿ ಬಿದಿರಿಗೆ ₹ 40.20 ನಿಗದಿಪಡಿಸಲಾಗಿದೆ. ಸಂಪೂರ್ಣ ಒಣಗಿರುವ ಮರಕ್ಕೆ ಪ್ರತಿ ಟನ್ಗೆ ₹ 4000 ನಿಗದಿಪಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.