ನಟಿ ರನ್ಯಾ ರಾವ್
ಬೆಂಗಳೂರು: ‘ನಟಿ ರನ್ಯಾ ರಾವ್ ಮತ್ತು ಉದ್ಯಮಿ ತರುಣ್ ರಾಜು ಅವರು ದುಬೈನಿಂದ ಬೆಂಗಳೂರಿಗೆ ಒಟ್ಟು 31 ಕೆ.ಜಿ.ಯಷ್ಟು ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಾರೆ’ ಎಂದು ರೆವೆನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಹೇಳಿದೆ.
ತರುಣ್ ರಾಜು ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿ ವಿಚಾರಣೆ ನಡೆಸುತ್ತಿರುವ ಸಿಸಿಎಚ್ ನ್ಯಾಯಾಲಯಕ್ಕೆ, ಡಿಆರ್ಐ ತನ್ನ ಆಕ್ಷೇಪಣೆಯನ್ನು ಸಲ್ಲಿಸಿತ್ತು. ಡಿಆರ್ಐನ ಆಕ್ಷೇಪಣೆಯ ಪ್ರತಿ ಮಾಧ್ಯಮಗಳಿಗೆ ಸೋರಿಕೆಯಾಗಿದ್ದು, ‘ರನ್ಯಾ ರಾವ್ ಮತ್ತು ತರುಣ್ ರಾಜು ಅವರು 31 ಕೆ.ಜಿ.ಯಷ್ಟು ಚಿನ್ನ ಕಳ್ಳಸಾಗಣೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಆ ಚಿನ್ನಕ್ಕೆ ಸಂಬಂಧಿಸಿದ ಹಣವನ್ನು ಹವಾಲಾ ಮೂಲಕ ದುಬೈಗೆ ರವಾನೆ ಮಾಡಿರುವ ಬಗ್ಗೆ ಇಬ್ಬರೂ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ’ ಎಂದ ವಿವರ ಅದರಲ್ಲಿದೆ.
‘ಇಬ್ಬರು ಆರೋಪಿಗಳು ಬೆಂಗಳೂರಿನಿಂದ ದುಬೈಗೆ, ದುಬೈನಿಂದ ಬೆಂಗಳೂರಿಗೆ ಹಲವು ಬಾರಿ ಪ್ರಯಾಣ ಮಾಡಿದ್ದಾರೆ. ಒಂದು ವೇಳೆ ಪ್ರಕರಣ ಹೊರ ಬಂದರೆ, ತನಿಖೆಯ ಹಾದಿ ತಪ್ಪಿಸುವುದಕ್ಕಾಗಿಯೇ ಬೇರೆ–ಬೇರೆ ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ. ಹಲವು ಬಾರಿ ಇಬ್ಬರು ಪರಸ್ಪರ ಭೇಟಿಯೇ ಮಾಡಿಲ್ಲ’ ಎಂದು ಡಿಆರ್ಐ ನ್ಯಾಯಾಲಯಕ್ಕೆ ತಿಳಿಸಿದೆ.
‘ತರುಣ್ ಅಮೆರಿಕದ ಪೌರತ್ವ ಹೊಂದಿದ್ದು, ಅಲ್ಲಿನ ಪಾಸ್ಪೋರ್ಟ್ಗೆ ಇರುವ ಕೆಲ ವಿನಾಯತಿಗಳನ್ನು ಚಿನ್ನಕಳ್ಳಸಾಗಣೆಗೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಕಳ್ಳಸಾಗಣೆ ಸಂಬಂಧ ತರುಣ್ ಮತ್ತು ರನ್ಯಾ ವ್ಯವಸ್ಥಿತ ಕಾರ್ಯವಿಧಾನವನ್ನು ರೂಪಿಸಿಕೊಂಡಿದ್ದು, ಆ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದಿದೆ.
‘31 ಕೆ.ಜಿ ಚಿನ್ನಕ್ಕೆ ಸಂಬಂಧಿಸಿದಂತೆ ₹12.30 ಕೋಟಿಯನ್ನಷ್ಟೇ ಹವಾಲಾ ಮೂಲಕ ರವಾನೆ ಮಾಡಿದ್ದಾರೆ. ಚಿನ್ನದ ಮಾರುಕಟ್ಟೆ ಬೆಲೆಗೂ, ಹವಾಲಾ ಮೂಲಕ ಕಳುಹಿಸಿದ ಹಣಕ್ಕೂ ಬಹಳ ವ್ಯತ್ಯಾಸವಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಕಳ್ಳಸಾಗಣೆ ಚಿನ್ನದ ಬೆಲೆ ಮತ್ತು ತೆರಿಗೆ ವಂಚನೆಯ ಪ್ರಮಾಣದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.