ADVERTISEMENT

ರಾಜ್ಯದಲ್ಲಿ ಮೂರು ವರ್ಷಗಳಲ್ಲಿ 1,673 ಅತ್ಯಾಚಾರ: ಆರು ಮಂದಿಗಷ್ಟೇ ಶಿಕ್ಷೆ!

ಕೆ.ಎಸ್ ಸುನಿಲ್
Published 10 ಡಿಸೆಂಬರ್ 2024, 22:49 IST
Last Updated 10 ಡಿಸೆಂಬರ್ 2024, 22:49 IST
<div class="paragraphs"><p>–ಪಿಟಿಐ ಚಿತ್ರ</p></div>
   

–ಪಿಟಿಐ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಏರಿಕೆಯಾಗುತ್ತಲೇ ಇದ್ದರೂ, ಈ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ತೀರಾ ಕಡಿಮೆ.

ರಾಜ್ಯದಲ್ಲಿ 2022 ರಿಂದ 2024ರ ಅಕ್ಟೋಬರ್‌ವರೆಗೆ ದಾಖಲಾದ 1,673 ಅತ್ಯಾಚಾರ ಪ್ರಕರಣಗಳಲ್ಲಿ ಕೇವಲ ಆರು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದ್ದು, 74 ಪ್ರಕರಣಗಳು ಖುಲಾಸೆಗೊಂಡಿವೆ. ಒಟ್ಟು 298 ಪ್ರಕರಣಗಳು ತನಿಖೆಯಲ್ಲಿದ್ದು, 1,187 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. 108 ಪ್ರಕರಣಗಳು ಸುಳ್ಳು ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ADVERTISEMENT

2024ರಲ್ಲಿ ಬೆಂಗಳೂರು ನಗರವೊಂದರಲ್ಲೇ 131 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ತುಮಕೂರು 20, ಚಿಕ್ಕಬಳ್ಳಾಪುರ ಮತ್ತು ಹಾಸನದಲ್ಲಿ ತಲಾ 17  ಪ್ರಕರಣಗಳು ದಾಖಲಾಗಿವೆ.

ರಾಜ್ಯ ಅಪರಾಧ ದಾಖಲೆಗಳ ಬ್ಯೂರೊ (ಎಸ್‌ಸಿಆರ್‌ಬಿ) ಪ್ರಕಾರ, ಪ್ರಸಕ್ತ ವರ್ಷ ಜನವರಿಯಿಂದ ಸೆಪ್ಟೆಂಬರ್‌ವರೆಗೆ 300 ಅತ್ಯಾಚಾರ ಪ್ರಕರಣಗಳು ಪರಿಚಿತ ವ್ಯಕ್ತಿಗಳಿಂದಲೇ ನಡೆದಿದೆ. 34 ಸಂತ್ರಸ್ತರ ಸಂಬಂಧಿಕರು, 37 ಅವರ ನೆರೆ ಹೊರೆಯವರು, ಎಂಟು ಅಪರಿಚಿತ ವ್ಯಕ್ತಿಗಳು ಮತ್ತು 11 ಸಾಮೂಹಿಕ ಅತ್ಯಾಚಾರ ಪ್ರಕರಣಗಳು ನಡೆದಿವೆ.

ರಾಜ್ಯದಲ್ಲಿ ವರದಿಯಾದ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣವು ಶೇಕಡ 0.36 ರಷ್ಟಿದೆ. ಸಾಕ್ಷ್ಯಾಧಾರಗಳ ಕೊರತೆ, ಸುಳ್ಳು ಪ್ರಕರಣಗಳು, ತನಿಖೆ ಹಾಗೂ ವಿಚಾರಣೆ ವಿಳಂಬವಾಗುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

‘ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತರ ಹೇಳಿಕೆ ಅತಿ ಮುಖ್ಯ. ಕೆಲವು ಪ್ರಕರಣಗಳಲ್ಲಿ ಕುಟುಂಬ ಅಥವಾ ಬೇರೆಯವರ ಒತ್ತಡದಿಂದ ಅಥವಾ ಸಾಮಾಜಿಕ ಕಳಂಕದ ಭೀತಿಯಿಂದ ತಮ್ಮ ಹೇಳಿಕೆಗಳನ್ನು ಬದಲಿಸಿಬಿಡುತ್ತಾರೆ. ಹಾಗಾಗಿ ನ್ಯಾಯಾಧೀಶರ ಮುಂದೆ ಸ್ವಯಂಪ್ರೇರಣೆಯಿಂದ ಹೇಳಿಕೆ ದಾಖಲಿಸುವಂತೆ ಮನವಿ ಮಾಡುತ್ತೇವೆ. ಅನೇಕ ಸಂತ್ರಸ್ತೆಯರು ಸ್ವಯಂಪ್ರೇರಿತ ಹೇಳಿಕೆ ನೀಡಲು ನಿರಾಕರಿಸುತ್ತಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಹಲವು ಪ್ರಕರಣಗಳಲ್ಲಿ ಸಂತ್ರಸ್ತೆಯೇ ಪ್ರತಿಕೂಲ ಸಾಕ್ಷಿಯಾಗಿ ಬದಲಾಗುತ್ತಾರೆ. ಹೀಗಾಗಿ ಪ್ರಕರಣ ನ್ಯಾಯಾಲಯದಲ್ಲಿ ಬಿದ್ದು ಹೋಗುತ್ತದೆ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

‘ಅತ್ಯಾಚಾರ ಆದ 24 ಗಂಟೆಗಳ ಒಳಗಾಗಿ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಆಗಬೇಕು. ಘಟನೆ ಸ್ಥಳದಲ್ಲಿ ವಿಧಿವಿಜ್ಞಾನ ತಂಡ ಸಾಕ್ಷ್ಯಾಧಾರ ಸಂಗ್ರಹಿಸಬೇಕು. ನ್ಯಾಯಾಧೀಶರ ಮುಂದೆ ಸಂತ್ರಸ್ತೆಯ ಹೇಳಿಕೆ ದಾಖಲಿಸಬೇಕು. ಆದರೆ, ಬಹುತೇಕ ಪ್ರಕರಣಗಳಲ್ಲಿ ತನಿಖಾ ತಂಡಗಳು ಸೂಕ್ತ ಸಾಕ್ಷ್ಯಾಧಾರಗಳನ್ನು ಕೆಲ ಹಾಕುವಲ್ಲಿ ವಿಫಲವಾಗುತ್ತವೆ’ ಎಂದು ವಕೀಲೆ ಆರ್‌. ಮಂಜುಳಾ ದೇವಿ ಹೇಳಿದರು.

‘ವಿಚಾರಣೆ 3-5 ವರ್ಷಗಳವರೆಗೆ ತೆಗೆದುಕೊಳ್ಳುತ್ತದೆ. ವಿಚಾರಣೆ ವಿಳಂಬವಾದಷ್ಟು ನೆನಪಿನ ಶಕ್ತಿ ಕಡಿಮೆ ಆಗುತ್ತದೆ. ಸಾಕ್ಷಿಗಳು ಉಲ್ಟಾ ಹೊಡೆಯುತ್ತಾರೆ. ಕೆಲವು ಪ್ರಕರಣಗಳಲ್ಲಿ ಆರೋಪಿಯನ್ನು ಮದುವೆಯಾಗುವಂತೆ ಸಂತ್ರಸ್ತೆಯನ್ನು ಒತ್ತಾಯಿಸಲಾಗುತ್ತದೆ. ಸಂತ್ರಸ್ತೆ ಅಥವಾ ದೂರುದಾರರು ದೂರು ನೀಡುವಾಗಲೇ ಹಲವು ಲೋಪದೋಷಗಳಿರುತ್ತವೆ. ಇದನ್ನೇ ಆರೋಪಿ ಪರ ವಕೀಲರು ಲಾಭದಾಯಕವಾಗಿ ಪರಿಗಣಿಸುತ್ತಾರೆ. ಇದರಿಂದಲೂ ಸಂತ್ರಸ್ತೆಗೆ ನ್ಯಾಯ ಮರೀಚಿಕೆಯಾಗುತ್ತದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.