ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನು ಇಂಟರ್ಪೋಲ್ ಪೊಲೀಸರು ಪಶ್ಚಿಮ ಆಫ್ರಿಕಾದ ಸೆನೆಗಲ್
ನಲ್ಲಿ ಬಂಧಿಸುತ್ತಿದ್ದಂತೆ, ರಾಜ್ಯದಲ್ಲಿರುವ ಆತನ ಸಹಚರರ ಮೇಲೆ ಇಲ್ಲಿಯ ಪೊಲೀಸರು ನಿಗಾ ವಹಿಸಿದ್ದಾರೆ.
ಮಂಗಳೂರಿನ ರವಿ ಪೂಜಾರಿ 15 ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ. ಆತನ ವಿರುದ್ಧ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳ ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದರು.
ಹೆಸರು ಬದಲಾಯಿಸಿಕೊಂಡು ಆಸ್ಟ್ರೇಲಿಯಾ, ದುಬೈ, ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಆತ ಓಡಾಡಿಕೊಂಡಿದ್ದ. ಆ ಬಗ್ಗೆ ಮಾಹಿತಿ ಕಲೆಹಾಕಿದ್ದ ಇಂಟರ್ಪೋಲ್ ಪೊಲೀಸರು, ಸೆನೆಗಲ್ನಲ್ಲಿ ಭೂಗತ ಪಾತಕಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆತನನ್ನು ಭಾರತಕ್ಕೆ ಕರೆತರಲು ಸಿಬಿಐ ಹಾಗೂ ಮಹಾರಾಷ್ಟ್ರ ಪೊಲೀಸರು ಈಗಾಗಲೇ ಸೆನೆಗಲ್ಗೆ ಹೋಗಿರುವ ಮಾಹಿತಿ ಇದೆ.
ಪೂಜಾರಿಯ ಸುಳಿವು ಕೊಟ್ಟಿದ್ದ ರೌಡಿ: ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ ರವಿ ಪೂಜಾರಿ, ಮುಂಬೈನ ರೌಡಿ ಆಕಾಶ್ ಶೆಟ್ಟಿ ಜೊತೆ ಒಡನಾಟ ಇಟ್ಟುಕೊಂಡಿದ್ದ. ಆತನೇ ಪೂಜಾರಿಯ ಬಗ್ಗೆ ಸುಳಿವು ಕೊಟ್ಟಿದ್ದ ಎಂದು ಮೂಲಗಳು ತಿಳಿಸಿವೆ.
ಮುಂಬೈನಲ್ಲಿ ರೆಸ್ಟೋರಂಟ್ ನಡೆಸುತ್ತಿದ್ದ ಆಕಾಶ್, ಕಳೆದ ತಿಂಗಳುದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದ ಮದುವೆಗೆ ಬಂದಿದ್ದ. ಅದೇ ವೇಳೆ ಆತನನ್ನು ಬಂಧಿಸಿದ್ದ ಮುಂಬೈ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದರು. ರವಿ ಪೂಜಾರಿ ವಿಳಾಸವನ್ನು ಆತ ಬಾಯ್ಬಿಟ್ಟಿ
ದ್ದ ಎಂದು ಮೂಲಗಳು ಹೇಳಿವೆ.
ಜ. 19ರಂದು ಬಂಧನ: ‘ರವಿ ಪೂಜಾರಿಯನ್ನು ಜ. 19ರಂದು ಬಂಧಿಸಲಾಗಿದೆ. ಆತನನ್ನು ಬಂಧಿಸಲು ಶ್ರಮಿಸಿದ ರಾಜ್ಯದ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
‘ಉದ್ಯಮಿ, ನಟರು ಸೇರಿದಂತೆ ಹಲವರಿಗೆ ಕರೆ ಮಾಡುತ್ತಿದ್ದ ಪೂಜಾರಿ ಜೀವ ಬೆದರಿಕೆ ಹಾಕುತ್ತಿದ್ದ. ಪೊಲೀಸ್ ಇಲಾಖೆಯ ಜೊತೆ ಚರ್ಚಿಸಿ ಆತನ ವಿರುದ್ಧದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲು ಸೂಚಿಸಿದ್ದೆ. ಮೂರ್ನಾಲ್ಕು ತಿಂಗಳಿನಿಂದ ಆತನ ಬಗ್ಗೆ ರಾಜ್ಯದ ಪೊಲೀಸರು ಮಾಹಿತಿ ಕಲೆಹಾಕಿದ್ದರು. ಆತ ಸೆನೆಗಲ್ನಲ್ಲಿರುವ ಮಾಹಿತಿ ತಿಳಿದುಕೊಂಡು ರಾಯಭಾರಿ ಕಚೇರಿಗೆ ವಿಷಯ ತಲುಪಿಸಿ
ದ್ದರು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.