ADVERTISEMENT

‘ಶಾಸಕ ಆನಂದ್‌ ಸಿಂಗ್‌ ಅಸಮಾಧಾನಕ್ಕೆ ಬೇರೆ ಕಾರಣ’

ನಾವು ಆಪರೇಷನ್‌ ಮಾಡಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 20:00 IST
Last Updated 3 ಜುಲೈ 2019, 20:00 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ಮಂತ್ರಿ ಮಾಡಿಲ್ಲ ಎಂದು ಆನಂದ್ ಸಿಂಗ್‌ ರಾಜೀನಾಮೆ ನೀಡಿಲ್ಲ. ಜಿಂದಾಲ್‌ ವಿಚಾರವಾಗಿ ಮಾತನಾಡಿದ್ದಾನೆ. ಆದರೆ, ಇವೆಲ್ಲಾ ಕಾರಣ ಅಲ್ಲ. ಅಸಮಾಧಾನಕ್ಕೆ ಬೇರೆ ಬೇರೆ ಕಾರಣಗಳೂ ಇವೆ’ ಎಂದು ಸಿದ್ದರಾಮಯ್ಯ ಬುಧವಾರ ಇಲ್ಲಿ ಹೇಳಿದರು.

‘ರಮೇಶ ಜಾರಕಿಹೊಳಿ ರಾಜೀನಾಮೆಯನ್ನೇ ನೀಡಿಲ್ಲ’ ಎಂದ ಅವರು, ‘ಆನಂದ್‌ ಸಿಂಗ್‌ ಒಬ್ಬನೇ ರಾಜೀನಾಮೆ ನೀಡಿದ್ದು, ಅವನೊಂದಿಗೆ ಮಾತನಾಡಿ ಮನವೊಲಿಸುತ್ತೇನೆ. ಆತ ವಾಪಸ್‌ ಪಡೆಯುತ್ತಾನೆ’ ಎಂದು ವಿಶ್ವಾಸ ವ್ಯಕ್ತ‍ಪಡಿಸಿದರು.

ಆಪರೇಷನ್‌ ಮಾಡಲ್ಲ: ‘ನಾವು ಯಾವುದೇ ರೀತಿಯ ಆಪರೇಷನ್‌ ಮಾಡಲ್ಲ’ ಎಂದು ಹೇಳಿದರು.ಮೋದಿ, ಶಾ ಹೆಣೆದ ತಂತ್ರ: ಸರ್ಕಾರ ಕೆಡವಲು ಬಿಜೆಪಿ ಪ್ರಯತ್ನಿಸುತ್ತಿಲ್ಲ ಎಂಬ ಸಚಿವ ಜಿ.ಟಿ.ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಜಿ.ಟಿ.ದೇವೇಗೌಡರಿಗೆ ಯಾವ ರೀತಿ ಮಾಹಿತಿ ಇದೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಸರ್ಕಾರ ಉರುಳಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಮೋದಿ, ಶಾ ಸೇರಿಯೇ ಈ ತಂತ್ರ ಹೆಣೆದಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಮುಂದುವರಿದ ವರುಣಾ ಸಭೆ

ತಮ್ಮ ಪುತ್ರ ಡಾ.ಯತೀಂದ್ರ ಪ್ರತಿನಿಧಿಸುತ್ತಿರುವ ವರುಣಾ ವಿಧಾನಸಭಾ ಕ್ಷೇತ್ರದ ಬೂತ್‌ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಸಭೆ ಮುಂದುವರಿಸಿದ್ದಾರೆ.

ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾದರೂ ಅದಕ್ಕೆ ಸಿದ್ಧರಾಗಿರುವಂತೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ. ಅದಕ್ಕಾಗಿ ಅವರ ಸಮಸ್ಯೆ ಆಲಿಸಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಉಂಟಾದ ಹಿನ್ನಡೆಗೆ ಕಾರಣವೇನು ಎಂಬ ಮಾಹಿತಿ ಸಂಗ್ರಹಿಸಿದ್ದಾರೆ. ಈ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಾಗಲೂ ಸಭೆ ಕರೆಯದ ಅವರು, ಒಂದು ತಿಂಗಳಲ್ಲಿ ಐದನೇ ಬಾರಿ ವರುಣಾ ಕ್ಷೇತ್ರದಲ್ಲಿ ಸಭೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.