ಬೆಂಗಳೂರು: ‘ಹೊಸ ಶಾಲೆಗಳನ್ನು ಆರಂಭಿಸಲು ಅಥವಾ ಸ್ವಾಭಾವಿಕ ಬೆಳವಣಿಗೆ ಅಡಿಯಲ್ಲಿ ಹೆಚ್ಚುವರಿ ವಿಭಾಗಗಳನ್ನು ಹೊಂದಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇದೇ 25ರವರೆಗೆ ಅವಕಾಶ ನೀಡಿರುವ ಶಿಕ್ಷಣ ಇಲಾಖೆ, ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಜುಲೈ 31 ಕೊನೆಯ ದಿನ ಎಂದು ನಿಗದಿಪಡಿಸಿದೆ. ಇದು ಗೊಂದಲಕ್ಕೆ ಕಾರಣವಾಗಿದೆ’ ಎಂದು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸ) ಆಕ್ಷೇಪ ವ್ಯಕ್ತಪಡಿಸಿದೆ.
‘ಮಾನ್ಯತೆ ನೀಡುವ ಪ್ರಕ್ರಿಯೆ ಮುಗಿಸದೆ, ಅರ್ಜಿ ಸಲ್ಲಿಸಿದ ಶಾಲೆಗಳನ್ನು ಕಾನೂನುಬಾಹಿರ ಶಾಲೆಗಳೆಂದು ಘೋಷಿಸುವುದು ಇಲಾಖೆಯ ಮೂರ್ಖತನದ ಪರಮಾವಧಿ. ಇಲಾಖೆ ದಿನಕ್ಕೊಂದು ಆದೇಶ ಹೊರಡಿಸುತ್ತಿದ್ದು, ಇದು ದ್ವಂದ್ವ ಹಾಗೂ ಬೇಜವಾಬ್ದಾರಿ ನಿಲುವು’ ಎಂದು ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅಭಿಪ್ರಾಯಪಟ್ಟಿದ್ದಾರೆ.
‘ಇಲಾಖೆ ಮಾನ್ಯತೆ ನೀಡುವಾಗ ಶಾಲೆಯಲ್ಲಿ ಮಕ್ಕಳು, ಪೀಠೋಪಕರಣ, ಶಿಕ್ಷಕರು ಇತ್ಯಾದಿ ವ್ಯವಸ್ಥೆಗಳು ಇರಲೇ ಬೇಕೆಂಬ ನಿಯಮಗಳನ್ನು ಕಡ್ಡಾಯ ಮಾಡಿದೆ. ಹೊಸ ಶಾಲೆಗಾಗಿ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಿಕೊಂಡಿರುವ ಸಾವಿರಾರು ಶಾಲೆಗಳು ಹಾಗೂ ಆ ಶಾಲೆಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳು ಈಗ ಆತಂಕಕ್ಕೀಡಾಗುವಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ. ಎರಡು ವರ್ಷಗಳಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಚಿವರು ತಾವು ನಡೆದಿದ್ದೇ ದಾರಿ ಎಂಬಂತೆ ಇಂಥ ಅನೇಕ ಗೊಂದಲಗಳನ್ನು ಸೃಷ್ಟಿಸಿ, ನಗೆಪಾಟಲಿಗೀಡಾಗುತ್ತಿದ್ದಾರೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.