ADVERTISEMENT

ರೆಡ್ಡಿಯೂ ಸಿಗಲಿಲ್ಲ ಜಾಮೀನೂ ಸಿಗಲಿಲ್ಲ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 20:14 IST
Last Updated 9 ನವೆಂಬರ್ 2018, 20:14 IST
ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ   

ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರನ್ನು ಹುಡುಕಿಕೊಂಡು ಹೈದರಾಬಾದ್‌ಗೆ ತೆರಳಿದ್ದ ಪೊಲೀಸರಿಗೆ ರೆಡ್ಡಿಯೂ ಸಿಗಲಿಲ್ಲ. ಇತ್ತ ರೆಡ್ಡಿಗೆ ಜಾಮೀನು ಸಹ ದೊರೆಯಲಿಲ್ಲ.

ಜಾಮೀನು ಅರ್ಜಿ ಇತ್ಯರ್ಥದ ಮುನ್ನವೇ ರೆಡ್ಡಿ ಅವರನ್ನು ಖೆಡ್ಡಾಕ್ಕೆ ಕೆಡವಬೇಕೆಂದು ಸಿಸಿಬಿ ಕಸರತ್ತು ನಡೆಸುತ್ತಿದ್ದರೆ, ಮತ್ತೊಂದೆಡೆ ಪೊಲೀಸರ ಕೈಗೆ ಸಿಗದೇ ಜಾಮೀನು ಪಡೆಯಬೇಕೆಂದು ರೆಡ್ಡಿ ಕಣ್ಣಾಮುಚ್ಚಾಲೆ ಮುಂದುವರಿಸಿದ್ದಾರೆ.

ಬೆಂಗಳೂರು, ಬಳ್ಳಾರಿ ಹಾಗೂ ಹೈದರಾಬಾದ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ತಂಡಗಳು, ಗುರುವಾರ ರಾತ್ರಿ ಬರಿಗೈಲಿ ನಗರಕ್ಕೆ ಮರಳಿದವು. ರೆಡ್ಡಿ ಶುಕ್ರವಾರ ಅಧಿಕೃತವಾಗಿ ಕಾನೂನು ಹೋರಾಟಕ್ಕಿಳಿದ ಕೂಡಲೇ, ಪೊಲೀಸರು ಅವರ ಆಪ್ತರ ಮೊಬೈಲ್ ಕರೆಗಳ ಜಾಡು ಹಿಡಿದು ಪುನಃ ಶೋಧ ಪ್ರಾರಂಭಿಸಿದ್ದಾರೆ. ಎರಡು ಹೆಚ್ಚುವರಿ ತಂಡಗಳು ಶನಿವಾರ ಹೈದರಾಬಾದ್‌ಗೆ ತೆರಳಲಿವೆ.

ADVERTISEMENT

ತಮಗೆ ಜಾಮೀನು ಸಿಗಬಹುದೆಂಬ ವಿಶ್ವಾಸದಲ್ಲಿ ರೆಡ್ಡಿ ಶುಕ್ರವಾರ ಸಂಜೆ ನಗರಕ್ಕೆ ಬಂದಿದ್ದರು ಎಂಬ ಮಾತುಗಳು ಕೋರ್ಟ್ ಆವರಣದಲ್ಲಿ ಕೇಳಿಬಂದವು. ಅದನ್ನು ನಿರಾಕರಿಸಿದ ಸಿಸಿಬಿ ಅಧಿಕಾರಿಯೊಬ್ಬರು, ‘ರೆಡ್ಡಿ ಹೈದರಾಬಾದ್‌ನಲ್ಲೇ ಅಡಗಿದ್ದಾರೆ. ಭಾನುವಾರದೊಳಗೆ ಬಂಧಿಸುವ ವಿಶ್ವಾಸವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.