ಬೆಂಗಳೂರು: ‘ರಾಜ್ಯದಲ್ಲಿ ರೆಮ್ಡಿಸಿವಿರ್ ಚುಚ್ಚುಮದ್ದು ಕೊರತೆ ಇರುವ ಸಂದರ್ಭದಲ್ಲಿ ಕಾಳಸಂತೆಯಲ್ಲಿ ಮಾರಾಟ ಆಗುತ್ತಿದೆ ಎಂದರೆ ಏನರ್ಥ? ಈ ಬಗ್ಗೆ ತನಿಖೆ ಮಾಡಿಸುತ್ತೇನೆ. ಅದರ ಪರಿಣಾಮವನ್ನು ನೀವೆಲ್ಲರೂ ಎದುರಿಸಬೇಕಾಗುತ್ತದೆ’ ಎಂದು ಅಧಿಕಾರಿಗಳ ಮೇಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗರಂ ಆದರು.
ರೆಮ್ಡಿಸಿವಿರ್ ಕೊರತೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಮಂಗಳವಾರ ತುರ್ತು ಸಭೆ ನಡೆಸಿದ ಅವರು, ‘ರೆಮ್ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ದಂಧೆಯಲ್ಲಿ ತೊಡಗಿರುವ ಬಗ್ಗೆ ನನಗೆ ದೂರುಗಳು ಬರುತ್ತಿವೆ. ಯಾರನ್ನೂ ಸುಮ್ಮನೆ ಬಿಡುವುದಿಲ್ಲ’ ಎಂದೂ ಎಚ್ಚರಿಕೆ ನೀಡಿದರು.
‘ವಿಜಯಪುರದಲ್ಲಿ ರೆಮ್ಡಿಸಿವಿರ್ ಸಂಗ್ರಹ ಇಟ್ಟುಕೊಂಡ ಮತ್ತು ಆಮ್ಲಜನಕ ಸಿಲಿಂಡರ್ ಹೆಚ್ಚು ದರಕ್ಕೆ ಮಾಡಿದ ಬಗ್ಗೆ ಆಸ್ಪತ್ರೆ ಮೇಲೆ ಎಫ್ಐಆರ್ ಮಾಡಿದ್ದೇವೆ’ ಎಂದು ಅಧಿಕಾರಿಯೊಬ್ಬರು ಹೇಳಿದಾಗ ಕೋಪಗೊಂಡ ಮುಖ್ಯಮಂತ್ರಿ. ‘ಕಾಳಸಂತೆಯಲ್ಲಿ ಬಹಳ ದುರುಪಯೋಗ ಆಗುತ್ತಿದೆ. ಮಾರಾಟ ಮಾಡುತ್ತಿದ್ದಾರೆ. ಹೊರರಾಜ್ಯಗಳಿಗೂ ಮಾರಾಟ ಮಾಡುತ್ತಿದ್ದಾರೆ ಎಂದು ನಮಗೆ ವರದಿ ಬಂದಿದೆ’ ಎಂದರು.
‘ಎಲ್ಲವನ್ನೂ ಮುಚ್ಚಿಟ್ಟುಕೊಂಡು ಯಾರೂ ಮಾತನಾಡಬೇಡಿ. ನಾನು ಇದರ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿಸುತ್ತೇನೆ. ತನಿಖೆ ಮಾಡಿಸಿದರೆ ಪರಿಣಾಮ ಬಹಳ ಕೆಟ್ಟದಿರುತ್ತದೆ. ಇಂಥ ಕಷ್ಟ ಕಾಲದಲ್ಲಿ ಕಾಳಸಂತೆಯಲ್ಲಿ ಮರಾಟ ಮಾಡಿ ದುರ್ಬಳಕೆ ಮಾಡಿ ದಂಧೆ ಮಾಡಿಕೊಂಡು ಕುಳಿತಿದಿದ್ದರೆ ನಾನು ಯಾರನ್ನೂ ಸಹಿಸಲ್ಲ’ ಎಂದರು.
‘ಈ ಸಭೆ ಕರೆದ ಉದ್ದೇಶವೇ ಅದು. ಸತ್ಯ ಸಂಗತಿಯನ್ನು ಮುಚ್ಚಿಟ್ಟುಕೊಂಡು ಯಾರೂ ಮಾತನಾಡಬೇಡಿ’ ಎಂದರು.
‘ಎಲ್ಲ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ’ ಎಂದು ಅಧಿಕಾರಿ ಸಮಜಾಯಿಸಿ ನೀಡಿದಾಗ ಮತ್ತೆ ಗರಂ ಆದ ಮುಖ್ಯಮಂತ್ರಿ, ‘ಕೆಲಸ ಮಾಡುವುದು ಮುಖ್ಯ ಅಲ್ಲಾರಿ... ಕಾಳಸಂತೆಯಲ್ಲಿ ಮಾರಾಟ ಮಾಡುವುದಕ್ಕೆ ಏನು ಹೇಳುತ್ತೀರಿ. ಕೆಲಸ ಮಾಡುವುದಿಲ್ಲ ಎಂದು ನಾನು ಹೇಳಿದ್ದೇನೆಯೇ’ ಎಂದು ಪ್ರಶ್ನಿಸಿದರು.
‘ರೆಮ್ಡಿಸಿವಿರ್ ನಮಗೆ ಕೊರತೆ ಇರುವ ಸಂದರ್ಭದಲ್ಲಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದರೆ ತನಿಖೆ ಮಾಡಿಸುತ್ತೇನೆ. ಅದರ ಪರಿಣಾಮ ಎದುರಿಸಿ’ ಎಂದು ಮತ್ತೆ ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.