ಬಳ್ಳಾರಿ: ಕನ್ನಡ ನಾಡಿಗೆ ನಟ ಡಾ.ರಾಜಕುಮಾರ್ ಸೇವೆ ಅನನ್ಯ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್ ಮನೋಹರ್ ಹೇಳಿದರು.
ನಗರದಲ್ಲಿ ಬುಧವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತ ಏರ್ಪಡಿಸಿದ್ದ ಡಾ.ರಾಜ್ ಜಯಂತಿಯಲ್ಲಿ ಮಾತನಾಡಿದ ಅವರು, 'ಡಾ.ರಾಜ್ ಎಲ್ಲ ಬಗೆಯ ಪಾತ್ರಗಳಲ್ಲೂ ಮನೋಜ್ಞವಾಗಿ ಅಭಿನಯಿಸುತ್ತಿದ್ದರು' ಎಂದರು.
ರಾಜ್ ಚಲನಚಿತ್ರಗಳಲ್ಲಿನ ಅಭಿನಯಕ್ಕೆ ಮಾರುಹೋದ ಹಲವರು ಉತ್ತಮ ಬದುಕನ್ನು ರೂಪಿಸಿಕೊಂಡರು ಎಂದರು.
'ಕನ್ನಡ ನಾಡಿಗೆ ಡಾ.ರಾಜಕುಮಾರ್ ನೀಡಿರುವ ಕೊಡುಗೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಈ ಜಯಂತಿಯನ್ನು ಎರಡನೇ ವರ್ಷ ಆಚರಿಸುತ್ತಿದೆ. ನೀತಿ ಸಂಹಿತೆ ಇರುವ ಕಾರಣ ಸರಳವಾಗಿ ಆಚರಿಸಲಾಗುತ್ತಿದೆ ಮುಂದಿನ ವರ್ಷದಿಂದ ವಿಜೃಂಭಣೆಯಿಂದ ಆಚರಿಸಲಾಗುವುದು' ಎಂದರು.
ನಗರದ ರಾಘವ ಕಲಾಮಂದಿರದ ಹತ್ತಿರ ರಸ್ತೆ ಬದಿಯಲ್ಲಿ ಇದ್ದ ಡಾ.ರಾಜಕುಮಾರ್ ರಸ್ತೆ ಎಂಬ ನಾಮಫಲಕವನ್ನು ಮತ್ತೆ ಅಳವಡಿಸುವಂತೆ ಕನ್ನಪರ ಸಂಘಟನೆಗಳ ಮುಖಂಡರು ಈ ಸಂದರ್ಭದಲ್ಲಿ ಕೋರಿದರು.
ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಡಾ.ರಾಜಕುಮಾರ್ ರಸ್ತೆ ಅಂತ ದೊಡ್ಡದಾಗಿ ಬರೆಯಿಸಿ ಹಾಕಲಾಗುವುದು' ಎಂದು ಭರವಸೆ ನೀಡಿದರು.
ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ, ಹೈ-ಕ ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಸಿರಿಗೆರೆ ಪನ್ನರಾಜ್, ಕನ್ನಡಪರ ಸಂಘಟನೆಗಳ ಮುಖಂಡರಾದ ಯರ್ರಿಸ್ವಾಮಿ, ಸುರೇಶ, ಮರಿದೇವಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.