ADVERTISEMENT

ಪಂಪ ಮಹಾಕವಿ ರಸ್ತೆ ಹೆಸರು ಬದಲಿಸುವ ಪ್ರಸ್ತಾವ: ಕರವೇ ಖಂಡನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 11:30 IST
Last Updated 12 ಸೆಪ್ಟೆಂಬರ್ 2022, 11:30 IST
   

ಬೆಂಗಳೂರು: ನಗರದ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯ ಹೆಸರನ್ನು ಬದಲಿಸುವ ಪ್ರಸ್ತಾವವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿಬಿಎಂಪಿಗೆ ಸಲ್ಲಿಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ.

ಕನ್ನಡದ ಆದಿಕವಿ ಪಂಪನ ರಸ್ತೆಯ ಹೆಸರನ್ನು ಕನ್ನಡಿಗರ ಪ್ರಾತಿನಿಧಿಕ ಸಂಘಟನೆ ಎಂದು ಹೇಳಿಕೊಳ್ಳುವ ಕನ್ನಡ ಸಾಹಿತ್ಯ ಪರಿಷತ್ತೇ ಬದಲಿಸಲು ಹೊರಟಿರುವುದು ವಿಲಕ್ಷಣ ಘಟನೆಯಾಗಿದೆ. ಪರಿಷತ್ತು ತನ್ನ ಮಾನವನ್ನು ತಾನೇ ಹರಾಜು ಹಾಕಿಕೊಂಡಂತಾಗಿದೆ‌ ಎಂದು ಕರವೇ ರಾಜ್ಯಾಧ್ಯಕ್ಷ ಟಿ. ನಾರಯಣ ಗೌಡ ಆರೋಪಿಸಿದರು.

‘ಪಂಪ ಮಹಾಕವಿ ರಸ್ತೆಯ ಒಂದು ಭಾಗಕ್ಕೆ ಮಾತ್ರ ಕನ್ನಡ ಸಾಹಿತ್ಯ ಪರಿಷತ್ತು ರಸ್ತೆ ಎಂದು ಹೆಸರಿಡುವ ಪ್ರಸ್ತಾವನೆ ಸಲ್ಲಿಸಿರುವುದಾಗಿ ಕಸಾಪ ಅಧ್ಯಕ್ಷ ಮಹೇಶ್ ಜೋಷಿಯವರೇ ಹೇಳಿರುವುದು ದುರಂತ. ಪಂಪನ ಹೆಸರಿನ ರಸ್ತೆಯ ಒಂದು ಮೀಟರ್ ರಸ್ತೆಯ ಹೆಸರನ್ನೂ ಬದಲಿಸುವುದು ಅವಶ್ಯವಿಲ್ಲ’ ಎಂದರು

ADVERTISEMENT

‘ಹತ್ತನೇ ಶತಮಾನದಲ್ಲಿ ಬದುಕಿದ ಪಂಪ ಮಹಾಕವಿ ಇಡೀ ಕನ್ನಡ ಸಾಹಿತ್ಯ ಚರಿತ್ರೆಗೆ ಮುನ್ನುಡಿಯನ್ನು ಬರೆದವರು. ಭೂಮಿ, ಸೂರ್ಯ, ಚಂದ್ರರು ಇರುವವರೆಗೆ ಅವರ ಹೆಸರು ಅಮರವಾಗಿರುತ್ತದೆ. ಸಾಹಿತ್ಯ ಪರಿಷತ್ತು ಇಂತಹ ದುಸ್ಸಾಹಸಕ್ಕೆ ಇಳಿದಿದ್ದು ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ವೇಳೆ ಪರಿಷತ್ತು ರಸ್ತೆಯ ಹೆಸರನ್ನು ಬದಲಿಸಲು ಹಟ ಹಿಡಿದಲ್ಲಿ, ಕರ್ನಾಟಕ ರಕ್ಷಣಾ ವೇದಿಕೆಯು ಕಸಾಪ ವಿರುದ್ಧವೇ ಪ್ರತಿಭಟನೆ ನಡೆಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.