ADVERTISEMENT

ರೇಣುಕಸ್ವಾಮಿ ಕೊಲೆ | ದಿಕ್ಕು ತಪ್ಪಿಸಲು ದರ್ಶನ್‌ಗೆ BP ಸಬೂಬು: ಪ್ರಾಸಿಕ್ಯೂಷನ್‌

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2024, 16:18 IST
Last Updated 6 ಡಿಸೆಂಬರ್ 2024, 16:18 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಒಳಗಾಗದಿದ್ದರೆ ನಾಳೆ ಬೆಳಿಗ್ಗೆಯೇ ಲಕ್ವ ಹೊಡೆದು ಬಿಡುತ್ತದೆ, ಸತ್ತೇ ಹೋಗಿ ಬಿಡುತ್ತಾರೆ... ಎಂಬೆಲ್ಲಾ ಆತಂಕಗಳನ್ನು ಧುಮುಧುಮಿಸಿ ವೈದ್ಯಕೀಯ ನೆರವಿನ ಆಧಾರದಲ್ಲಿ ಮಧ್ಯಂತರ ಜಾಮೀನು ಪಡೆದಿರುವ ನಟ ದರ್ಶನ್‌ ನ್ಯಾಯಾಲಯದ ದಾರಿ ತಪ್ಪಿಸಿದ್ದಾರೆ. ಅಷ್ಟೇಕೆ, ಹೈಕೋರ್ಟ್‌ನ ಸಹಾನುಭೂತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ ಬಲವಾಗಿ ಆರೋಪಿಸಿದೆ.

ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ, ನಟ ದರ್ಶನ್‌ ತೂಗುದೀಪ ಶ್ರೀನಿವಾಸ್‌, ಆರ್‌.ನಾಗರಾಜು, ಎಂ.ಲಕ್ಷ್ಮಣ್, ಅನುಕುಮಾರ್‌ ಅಲಿಯಾಸ್‌ ಅನು, ಜಗದೀಶ್‌ ಅಲಿಯಾಸ್‌ ಜಗ್ಗ ಸಲ್ಲಿಸಿರುವ  ನಿಯಮಿತ (ರೆಗ್ಯುಲರ್) ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಮುಂದುವರಿಸಿತು.

ವಿಶೇಷ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನ ಕುಮಾರ್‌ ವಾದ ಮಂಡಿಸಿ, ‘ದರ್ಶನ್‌ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ವತಿಯಿಂದ ನವೆಂಬರ್‌ 6 ಮತ್ತು 21ರಂದು ಎರಡು ವೈದ್ಯಕೀಯ ವರದಿಗಳನ್ನು ನೀಡಲಾಗಿದೆ. ನವೆಂಬರ್‌ 6ರ ವರದಿಯಲ್ಲಿ; ಶಸ್ತ್ರಚಿಕಿತ್ಸೆ ನಡೆಸುವ ತನಕ ಮಧ್ಯಂತರ ಚಿಕಿತ್ಸೆ ಮುಂದುವರಿಯುತ್ತದೆ. ಇದು ತಾತ್ಕಾಲಿಕವಾಗಿದ್ದು, ಶಸ್ತ್ರಚಿಕಿತ್ಸೆ ಬಾಕಿ ಇದೆ ಎಂದು ವಿವರಿಸಲಾಗಿದೆ. ಆದರೆ, ನವೆಂಬರ್‌ 21ರಂದು ದರ್ಶನ್‌ ರಕ್ತದೊತ್ತಡದಲ್ಲಿ (ಬಿ.ಪಿ) ವ್ಯತ್ಯಯವಾಗುತ್ತಿದ್ದು ಶಸ್ತ್ರಚಿಕಿತ್ಸೆಗೆ ಅಣಿಗೊಳಿಸಬೇಕಿದೆ. ಶಸ್ತ್ರಚಿಕಿತ್ಸೆಯಾದ ಬಳಿಕ ಎಷ್ಟು ದಿನಗಳಲ್ಲಿ ಚೇತರಿಸಿಕೊಳ್ಳಬಹುದು ಎಂಬುದನ್ನು ನಂತರವೇ ಅಂದಾಜಿಸಲಾಗುವುದು ಎಂದು ತಿಳಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ವೈದ್ಯಕೀಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದು ಐದು ವಾರ ಕಳೆದಿದೆ. ಆದರೆ, ಈತನಕ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ಬಿ.ಪಿ ಏರುಪೇರು ಎಂಬುದು ಸಬೂಬಷ್ಟೇ. ಬಿ.ಪಿ ವ್ಯತ್ಯಾಸವಾಗುತ್ತಿರುವ ಕಾರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿಲ್ಲ ಎಂದು ವೈದ್ಯರ ಹೇಳಿಕೆಯನ್ನು ಖಾತರಿಪಡಿಸಿಕೊಳ್ಳಲು ಪ್ರಾಸಿಕ್ಯೂಷನ್‌ ತಜ್ಞ ವೈದ್ಯರನ್ನು ಸಂಪರ್ಕ ಮಾಡಿದಾಗ; ಶಸ್ತ್ರಚಿಕಿತ್ಸೆ ಅಗತ್ಯವಾಗಿರುವಾಗ ಅತಿಯಾದ ಬಿ.ಪಿಯಿಂದ ಬಳಲುತ್ತಿರುವ ರೋಗಿಗೆ ಅಮಲಾಂಗ್‌–5 ಎಂ.ಜಿ ಗುಳಿಗೆ ಕೊಟ್ಟರೆ ತಂತಾನೇ ಸರಿ ಹೋಗುತ್ತದೆ. ಬಿ.ಪಿ ಕಡಿಮೆ ಮಾಡಿ ಎಂತೆಂತಹುದೋ ಗಂಭೀರ ಶಸ್ತ್ರಚಿಕಿತ್ಸೆಗಳನ್ನೆಲ್ಲಾ ನಡೆಸಲಾಗುತ್ತದೆ ಎಂಬುದು ವೇದ್ಯವಾಗಿದೆ. ಆದರೆ, ದರ್ಶನ್‌ ಬಿ.ಪಿ ಎಂತಹುದಿರಬಹುದು’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಪ್ರಕರಣದ ಹೆಚ್ಚುವರಿ ಪ್ರಾಸಿಕ್ಯೂಟರ್‌ ಸಿ.ಸಚಿನ್‌ ಹಾಜರಿದ್ದರು.

ವೈದ್ಯರು–ದರ್ಶನ್‌ ನಡವಳಿಕೆ ಪ್ರಶ್ನಾರ್ಹ

‘ದರ್ಶನ್‌ ಅವರನ್ನು ಶಸ್ತ್ರಚಿಕಿತ್ಸೆಗೆ ಸಜ್ಜುಗೊಳಿಸಲಾಗುತ್ತಿದೆ ಎಂಬ ವೈದ್ಯರ ವಿವರಣೆ ಹೇಗಿದೆಯೆಂದರೆ ಸಿನಿಮಾದಲ್ಲಿ ಹೇಳುವಂತೆ; ಸೋಪ್‌ ಹಾಕ್ಕೊಳಿ ತಲೆ ತೊಳ್ಕೊಳಿ ತಲೆ ಬಾಚ್ಕೊಳಿ ಪೌಡರ್‌ ಹಾಕ್ಕೊಳ್ಳಿ… ಎಂಬಂತಿದೆ. ಈ ದಿಸೆಯಲ್ಲಿ ಅವರಿಗೆ ಚಿಕಿತ್ಸೆ ನೀಡಿ ವರದಿ ಸಲ್ಲಿಸುತ್ತಿರುವ ವೈದ್ಯರು ಮತ್ತು ಆರೋಪಿ ದರ್ಶನ್‌ ನಡವಳಿಕೆ ಪ್ರಶ್ನಾರ್ಹವಾಗಿದೆ. ಆದ್ದರಿಂದ ದರ್ಶನ್‌ ಮಧ್ಯಂತರ ಜಾಮೀನಿನಲ್ಲೇ ಮುಂದುವರಿಯಲು ಅರ್ಹರಲ್ಲ. ಅವರು ನ್ಯಾಯಾಲಯಕ್ಕೆ ಶರಣಾಗಲೇಬೇಕು. ತದನಂತರ ಅವರ ನಿಯಮಿತ ಜಾಮೀನು ಅರ್ಜಿಯ ವಿಚಾರಣೆ ನಡೆಸಬಹುದು’ ಎಂದು ವಿಶೇಷ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನ ಕುಮಾರ್ ಪ್ರತಿಪಾದಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್‌ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ ‘ಮಧ್ಯಂತರ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರಾದರೂ ಇದಕ್ಕೆ ನ್ಯಾಯಪೀಠ ‘ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದ ಮಾತ್ರಕ್ಕೆ ಇಲ್ಲಿ ವಾದ ಮಂಡಿಸಬಾರದು ಎಂದೇನಿಲ್ಲ’ ಎಂದು ನುಡಿಯಿತು. ಇದೇ ವೇಳೆ ಪ್ರಕರಣದ 14ನೇ ಆರೋಪಿ ಪ್ರದೋಷ್‌ ಪರ ಹಿರಿಯ ವಕೀಲ ಕೆ.ದಿವಾಕರ್‌ ಕೂಡಾ ವಾದ ಮಂಡಿಸಿದರು. ದಿನದ ಕಲಾಪ ಅಂತ್ಯಗೊಂಡ ಕಾರಣ ನ್ಯಾಯಪೀಠ ವಿಚಾರಣೆಯನ್ನು ಇದೇ 9ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.