ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ರೇಣುಕಸ್ವಾಮಿ ಕೊಲೆ ಪ್ರಕರಣ: ಜಾಮೀನು ಅರ್ಜಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 20:22 IST
Last Updated 9 ಡಿಸೆಂಬರ್ 2024, 20:22 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ನಿಯಮಿತ (ರೆಗ್ಯುಲರ್‌) ಜಾಮೀನು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ. ಅಂತೆಯೇ, ಎರಡನೇ ಆರೋಪಿ ನಟ ದರ್ಶನ್‌ ತೂಗುದೀಪ ಶ್ರೀನಿವಾಸ್‌ಗೆ ನೀಡಲಾಗಿರುವ ವೈದ್ಯಕೀಯ ನೆರವಿನ ಮಧ್ಯಂತರ ಜಾಮೀನು ಅರ್ಜಿಯನ್ನು, ನಿಯಮಿತ ಜಾಮೀನು ಅರ್ಜಿ ವಿಲೇವಾರಿ ಆಗುವತನಕ ಮುಂದುವರಿಸಿದೆ.

ಆರೋಪಿಗಳಾದ ಪವಿತ್ರಾ ಗೌಡ, ನಟ ದರ್ಶನ್‌ ತೂಗುದೀಪ ಶ್ರೀನಿವಾಸ್‌, ಆರ್‌.ನಾಗರಾಜು, ಎಂ.ಲಕ್ಷ್ಮಣ್, ಅನುಕುಮಾರ್‌ ಅಲಿಯಾಸ್‌ ಅನು, ಜಗದೀಶ್‌ ಅಲಿಯಾಸ್‌ ಜಗ್ಗ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಮುಂದುವರಿಸಿತು.

ADVERTISEMENT

ವಿಶೇಷ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನ ಕುಮಾರ್‌, ‘ಪ್ರಕರಣದ ಎಲ್ಲಾ ಆರೋಪಿಗಳ ಡಿಜಿಟಲ್‌ ಹೆಜ್ಜೆ ಗುರುತುಗಳು ಘಟನೆಯಲ್ಲಿ ಅವರ ಪಾತ್ರವನ್ನು ನಿರೂಪಿಸುತ್ತದೆ. ಆರೋಪಿಗಳೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ದರ್ಶನ್‌ ಜೊತೆ ಕೆಲಸ ಮಾಡುತ್ತಿದ್ದವರೇ ಆಗಿದ್ದಾರೆ. ಇಡೀ ಪ್ರಕರಣ ಪಿತೂರಿಯ ಭಾಗವಾಗಿ ರೂಪುಗೊಂಡು ಅನುಷ್ಠಾನಗೊಂಡಿದೆ. ಮೃತ ರೇಣುಕಸ್ವಾಮಿ ದೇಹದಲ್ಲಿ 17 ಮೂಳೆ ಮುರಿತ ಮತ್ತು 39 ಗಾಯಗಳು ಪತ್ತೆಯಾಗಿವೆ. ದರ್ಶನ್‌ ಹಲ್ಲೆಯಿಂದ ರೇಣುಕಸ್ವಾಮಿಯ ವೃಷಣಗಳಿಗೆ ತೀವ್ರ ಹಾನಿಯಾಗಿರುವುದು ಸ್ಪಷ್ಟವಾಗಿದೆ’ ಎಂದು ವಾದ ಮಂಡಿಸಿದರು.

‘ಮೊದಲನೇ ಆರೋಪಿ ಪವಿತ್ರಾ ಗೌಡ, ರೇಣುಕಸ್ವಾಮಿಯನ್ನು ದರ್ಶನ್‌ ಬೆಂಗಳೂರಿಗೆ ಕರೆಸಿರುವ ವಿಚಾರವನ್ನು ತನ್ನ ಗೆಳತಿಗೆ ವಾಟ್ಸ್‌ ಆ್ಯಪ್‌ ಕರೆ ಮಾಡಿ ತಿಳಿಸಿದ್ದಾರೆ. ರೇಣುಕಸ್ವಾಮಿಯ ಕೊಲೆ ಮುಚ್ಚಿಹಾಕುವುದಕ್ಕೆ ದರ್ಶನ್‌ ₹30 ಲಕ್ಷ ನೀಡಿರುವುದು ಮತ್ತು ಆನಂತರ ಬೇರೆ ಬೇರೆ ಆರೋಪಿಗಳಿಂದ ನಿರ್ದಿಷ್ಟ ಮೊತ್ತವನ್ನು ತನಿಖಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ದರ್ಶನ್‌, ಪವಿತ್ರಾಗೌಡ ಮತ್ತಿತರರು ಕಾರಿನಲ್ಲಿ ಬಂದಿರುವುದಕ್ಕೆ ಸಿಸಿಟಿವಿ ದೃಶ್ಯಾವಳಿ, ಫೋನ್‌ ಕರೆಯ ದಾಖಲೆಗಳಿವೆ. ರೇಣುಕಸ್ವಾಮಿ ಹತ್ಯೆಯು ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 302ರ ಅಡಿ ವ್ಯವಸ್ಥಿತ ಕೊಲೆಯೇ ವಿನಃ ಐಪಿಸಿ ಕಲಂ 304ರ ಅಡಿಯ ಉದ್ದೇಶಪೂರ್ವಕವಲ್ಲದ ನರಹತ್ಯೆ ಎಂಬ ಅಪರಾಧ ಆಗುವುದಿಲ್ಲ’ ಎಂದು ‍ಪ್ರತಿಪಾದಿಸಿದರು.

ಒಂದು ಹಂತದಲ್ಲಿ ದರ್ಶನ್‌ ಪರ ಹಾಜರಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರ ವಾದಕ್ಕೆ ಪ್ರತಿಕ್ರಿಯಿಸಿದ ಪ್ರಸನ್ನ ಕುಮಾರ್‌, ‘ಇವರ ವಾದವನ್ನು ಕೇಳುತ್ತಿದ್ದರೆ, ರೇಣುಕಸ್ವಾಮಿಯ ಕೊಲೆಯೇ ಆಗಿಲ್ಲ ಎನ್ನುವಂತಿದೆ. ಬಹುಶಃ ರೇಣುಕಸ್ವಾಮಿ ಏನಾದರೂ ನ್ಯಾಯಾಲಯಕ್ಕೆ ಬಂದಿದ್ದಾರಾ ಎನಿಸುತ್ತಿದೆ’ ಎಂದು ಕುಟುಕಿದರು.

ವೈದ್ಯಕೀಯ ವರದಿ: ದರ್ಶನ್‌ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌, ‘ದರ್ಶನ್‌ ಯಾವಾಗ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ನಿರ್ಧರಿಸಬೇಕಾದವರು ವೈದ್ಯರೇ ವಿನಃ ದರ್ಶನ್‌ ಅಲ್ಲ. ಅದಾಗ್ಯೂ, ದರ್ಶನ್‌ಗೆ ಇದೇ 11ರಂದು ಬೆನ್ನಿನ ಕೆಳಭಾಗದಲ್ಲಿ ಬೆನ್ನುಹುರಿ ಮತ್ತು ನರಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ (Lumbar decompression & fusion) ನಡೆಸಲು ನಿರ್ಧರಿಸಲಾಗಿದೆ’ ಎಂದು ವೈದ್ಯರ ವರದಿಗಳನ್ನು ನ್ಯಾಯ‍ಪೀಠಕ್ಕೆ ಸಲ್ಲಿಸಿದರು.

ದರ್ಶನ್‌ ವ್ಯವಸ್ಥಾಪಕ, 11ನೇ ಆರೋಪಿಯಾದ ಆರ್‌.ನಾಗರಾಜು ಅವರ ಪರ ಹಿರಿಯ ವಕೀಲ ಸಂದೇಶ್‌ ಜೆ. ಚೌಟ ವಾದ ಮಂಡಿಸಿದರು. ಅಂತೆಯೇ ಇದೇ ವೇಳೆ 10ನೇ ಆರೋಪಿಯಾಗಿರುವ ಪಟ್ಟಣಗೆರೆ ಶೆಡ್‌ ಮಾಲೀಕ ಜಯಣ್ಣ ಅವರ ಸಂಬಂಧಿ ವಿ.ವಿನಯ್‌ ತಮ್ಮ ಜಾಮೀನು ಅರ್ಜಿಯನ್ನು ಹಿಂಪಡೆದರು. ಪ್ರಾಸಿಕ್ಯೂಷನ್‌ ಪರ ಹೆಚ್ಚುವರಿ ಪ್ರಾಸಿಕ್ಯೂಟರ್‌ ಸಿ.ಸಚಿನ್‌ ಅವರು ಪ್ರಸನ್ನ ಕುಮಾರ್ ಅವರಿಗೆ ಸಹಕರಿಸಿದರು. ದರ್ಶನ್‌ ಪರ ವಕಾಲತ್ತು ವಹಿಸಿರುವ ಹೈಕೋರ್ಟ್‌ ವಕೀಲ ಎಸ್‌.ಸುನಿಲ್‌ ಕುಮಾರ್ ಹಾಜರಿದ್ದರು.

ಎರಡು ಗಂಟೆ ಪ್ರಾಸಿಕ್ಯೂಷನ್‌ ಮತ್ತು ಅರ್ಜಿದಾರರ ಪರ ವಕೀಲರ ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಜಾಮೀನು ಅರ್ಜಿಗಳ ಆದೇಶ ಕಾಯ್ದಿರಿಸಿತು. ಅಂತೆಯೇ, ‘ದರ್ಶನ್‌ ಜಾಮೀನು ಅರ್ಜಿಯ ಆದೇಶ ಪ್ರಕಟವಾಗುವ ತನಕ ಅವರಿಗೆ ಅಕ್ಟೋಬರ್‌ 30ರಂದು ಮಂಜೂರು ಮಾಡಿರುವ ವೈದ್ಯಕೀಯ ಜಾಮೀನು ಆದೇಶ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.