ADVERTISEMENT

ಹುಡುಗಿಯ ದಯಪಾಲಿಸು ಮೈಲಾರಲಿಂಗ!

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 5:37 IST
Last Updated 15 ಫೆಬ್ರುವರಿ 2020, 5:37 IST
   

ಹೂವಿನಹಡಗಲಿ: ತಾಲ್ಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಜಾತ್ರೆ ಪ್ರಯುಕ್ತ ದೇವಸ್ಥಾನದಲ್ಲಿ ಅಳವಡಿಸಿದ್ದ ತಾತ್ಕಾಲಿಕ ಕಾಣಿಕೆ ಹುಂಡಿಗಳನ್ನು ಗುರುವಾರ ತೆರೆದು ನಗದು ಎಣಿಕೆ ಮಾಡಲಾಯಿತು.

ಈ ವೇಳೆ, ಕಾಣಿಕೆಯೊಂದಿಗೆ ಪತ್ರವೊಂದು ಪತ್ತೆಯಾಗಿದೆ. ‘ಪ್ರೀತಿಸಿದ ಹುಡುಗಿ ತನಗೆ ಸಿಗುವಂತೆ ದಯಪಾಲಿಸು ಮೈಲಾರಲಿಂಗ’ ಎಂದು ಯುವಕನೊಬ್ಬ ಚೀಟಿ ಬರೆದು ಕಾಣಿಕೆಯೊಂದಿಗೆ ಹುಂಡಿಯಲ್ಲಿ ಹಾಕಿರುವುದು ಪತ್ತೆಯಾಯಿತು. ಹುಂಡಿ ಎಣಿಕೆಯ ಸಂದರ್ಭದಲ್ಲಿ ಸಿಕ್ಕ ಪತ್ರವನ್ನು ನೋಡಿದಾಗ ಅದರಲ್ಲಿ ಮೇಲಿನ ಒಕ್ಕಣಿಕೆ ಇತ್ತು. ಇಷ್ಟಾರ್ಥ ಸಿದ್ಧಿಯ ಈ ವಿಚಿತ್ರ ಪತ್ರ ಕ್ಷಣಕಾಲ ಚರ್ಚೆಗೀಡಾಯಿತು.

₹36,86,183 ಹಣ ಸಂಗ್ರಹ

ADVERTISEMENT

‘ಜಾತ್ರೆಗೂ ಮುನ್ನ ಅಳವಡಿಸಿದ್ದ ಮೂರು ಮುಖ್ಯ ಹುಂಡಿ, ಒಂಬತ್ತು ತಾತ್ಕಾಲಿಕ ಕಾಣಿಕೆ ಹುಂಡಿಗಳಲ್ಲಿ ಭಕ್ತರಿಂದ ₹36,86,183 ಸಂಗ್ರಹವಾಗಿದೆ’ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್.ಪ್ರಕಾಶ ರಾವ್ ತಿಳಿಸಿದರು.

‘ಈ ಬಾರಿಯೂ ಭಕ್ತರೊಬ್ಬರು ₹10 ಲಕ್ಷ ಹಣವನ್ನು ಕಾಣಿಕೆ ಹುಂಡಿಗೆ ಹಾಕಿದ್ದಾರೆ. ₹2,000 ಮುಖಬೆಲೆಯ ಐದು ಕಂತೆಗಳು ಎಣಿಕೆ ವೇಳೆ ಸಿಕ್ಕವು. ಸ್ವಾಮಿಗೆ ಅರ್ಪಿಸುವ ಕಾಣಿಕೆ ಕುರಿತು ಯಾವುದೇ ಪ್ರಚಾರ ಬಯಸದ ಆ ಭಕ್ತ, ಕಳೆದ ನಾಲ್ಕು ವರ್ಷಗಳಿಂದ ಪ್ರತಿ ಬಾರಿ ₹10 ಲಕ್ಷ ಕಾಣಿಕೆಯನ್ನು ಹುಂಡಿಗೆ ಹಾಕುತ್ತಿದ್ದಾರೆ. ಸ್ವಾಮಿ ಅವರ ಇಷ್ಟಾರ್ಥ ನೆರವೇರಿಸಲಿ’ ಎಂದರು.

ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್, ಮುಜರಾಯಿ ಇಲಾಖೆ ಅಧೀಕ್ಷಕ ಮಲ್ಲಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಾ, ಮುಖಂಡರಾದ ಮಾಲತೇಶ, ಜಗದೀಶಗೌಡ, ಮಂಜುನಾಥ ನಾಗಪ್ಪನವರ, ಕೆ.ಶಂಕರ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.