ADVERTISEMENT

ಕುರುಬರಿಗೆ ಮೀಸಲಾತಿ: ಸರ್ಕಾರ ಇದ್ದರೂ ಈಶ್ವರಪ್ಪ ಹೋರಾಡುವುದೇಕೆ? –ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 11:29 IST
Last Updated 12 ಜನವರಿ 2021, 11:29 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ರಾಯಚೂರು: ‘ರಾಜ್ಯ ಮತ್ತು ಕೇಂದ್ರದಲ್ಲಿ ಅವರದ್ದೆ ಬಿಜೆಪಿ ಸರ್ಕಾರ ಇದ್ದರೂ ಕುರುಬರಿಗೆ ಪರಿಶಿಷ್ಟ ಜಾತಿ ಮೀಸಲಾತಿ ಕೊಡಿಸಲು ಸಚಿವ ಈಶ್ವರಪ್ಪ ಹೋರಾಟ ಮಾಡುತ್ತೀರುವುದೇಕೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಿಂಥಿಣಿ ಬ್ರಿಡ್ಜ್‌ ಕನಕಗುರು ಪೀಠದಲ್ಲಿ ಮಂಗಳವಾರದಿಂದ ಆರಂಭವಾದ ಹಾಲುಮತ ಸಂಸ್ಕೃತ ವೈಭವ ಉತ್ಸವ ಉದ್ಘಾಟಿಸುವ ಪೂರ್ವ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಈ ಹೋರಾಟ ಈಶ್ವರಪ್ಪ ವರ್ಸಸ್‌ ಯಡಿಯೂರಪ್ಪ ನಡೆಯುತ್ತಿದೆಯೇ? ಸರ್ಕಾರದ ಮೇಲೆ ಒತ್ತಡ ಹೇರಿ ಮೀಸಲಾತಿ ಕೊಡಿಸುವುದಕ್ಕೆ ಆಗುವುದಿಲ್ಲವೆ? ನಾನು ಮುಖ್ಯಮಂತ್ರಿಯಾಗಿದ್ದಾಗ ನಾಲ್ಕು ಜಿಲ್ಲೆಗಳಲ್ಲಿ ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಿಸಿದ್ದೇನೆ’ ಎಂದರು.

ADVERTISEMENT

‘ಈಗ ನಡೆಯುತ್ತಿರುವ ಮೀಸಲಾತಿ ಹೋರಾಟದ ಹಿಂದೆ ಆರ್‌ಎಸ್‌ಎಸ್‌ ಕೈವಾಡ ಇರುವುದರಿಂದಲೇ ನಾನು ವಿರೋಧಿಸುತ್ತಿದ್ದೇನೆ. ಕುರುಬರಿಗೆ ಎಸ್‌ಟಿ ಮೀಸಲಾತಿ ನೀಡುವುದಕ್ಕೆ ನನ್ನ ವಿರೋಧವಿಲ್ಲ. ರಾಜ್ಯದಲ್ಲಿ ಕುಲಶಾಸ್ತ್ರ ಅಧ್ಯಯನ ಆರಂಭಿಸಿ ಒಂದು ವರ್ಷವಾದರೂ ಏಕೆ ಪೂರ್ಣವಾಗುತ್ತಿಲ್ಲ. ಈ ಹೋರಾಟದ ಮೂಲಕ ಕುರುಬ ಸಮಾಜ ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಸಮಾಜದ ಮುಖಂಡರಾಗಬೇಕು ಎನ್ನುವ ಸಚಿವ ಈಶ್ವರಪ್ಪ ಕನಸು ಈಡೇರಿವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.