ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಹೆಚ್ಚಳ ಆಗದಂತೆ ಪ್ರಯತ್ನಿಸಿದವರೂ ಇದ್ದರು. ಆದರೆ, ನಮ್ಮ ಮುಖ್ಯಮಂತ್ರಿ ಚಾಣಕ್ಯರು, ಚಾಣಕ್ಯ ವಿದ್ಯೆ ಪ್ರಯೋಗ ಮಾಡಿ, ಮೀಸಲಾತಿ ಹೆಚ್ಚಳದ ದೃಢ ನಿರ್ಧಾರ ತೆಗೆದುಕೊಂಡು ಸುಗ್ರೀವಾಜ್ಞೆ ಯನ್ನೂ ಹೊರಡಿಸಿದರು’ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ 257 ದಿನಗಳಿಂದ ಹೋರಾಟ ನಡೆಸುತ್ತಿರುವ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರಿಗೆ ಸೋಮವಾರ ಸರ್ಕಾರದ ಆದೇಶ ಪ್ರತಿಯನ್ನು ನೀಡಿದ ಬಳಿಕ ಅವರು ಮಾತನಾಡಿದರು.
‘ಇದು ಜೇನುಗೂಡಿಗೆ ಕಲ್ಲೆಸೆ ಯುವ ಕೆಲಸವೆಂದು ಬಹಳಷ್ಟು ಜನ ಹೇಳಿದ್ದರು. ಆದರೂ ಹೆಚ್ಚಳ ಮಾಡುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಸ್ವಾಮೀಜಿ ಬಹಳ ಕಾಲ ಧರಣಿಯಲ್ಲೇ ಇರಲಿ ಎಂದು ಹಲವು ಜನ ಆಶಿಸಿದ್ದರು.ಬದ್ಧತೆಯಿಂದ ನಮ್ಮ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ವಾಲ್ಮೀಕಿ ಸಮಯದಾಯದ ಪೀಠಾಧ್ಯಕ್ಷ ರಿಗೆ ರಾಜ್ಯ ಪತ್ರ ಕೊಟ್ಟಿದ್ದೇವೆ. ಸಮುದಾಯ ಆನಂದದಿಂದ ವಿಶೇಷ ದೀಪಾವಳಿ ಆಚರಿಸಲಿ’ ಎಂದರು.
‘ನಮ್ಮ ಮುಖ್ಯಮಂತ್ರಿಯವರು ಚಾಣಕ್ಯ ಇದ್ದಂತೆ, ಯಾವ ಸಮಯದಲ್ಲಿ ಏನು ಮಾಡಬೇಕು. ಯಾವಾಗ ಕಲ್ಲು ಹೊಡೆದರೆ ಮಾವಿನಕಾಯಿ ಬೀಳುತ್ತದೆ ಎಂಬುದು ಅವರಿಗೆ ಗೊತ್ತು. ಆದ್ದರಿಂದ, ನೀವು ಹರ್ಷದಿಂದ ದೀಪಾವಳಿಯನ್ನು ಆಚರಿಸಿ. ಮೀಸಲಾತಿ ಹೆಚ್ಚಳ ದೀಪಾ ವಳಿಯ ಕೊಡುಗೆ’ ಎಂದು ಅಶೋಕ ಅವರು ಹೇಳಿದರು.
‘ಮೀಸಲಾತಿಗೆ ಸಂಬಂಧಿಸಿದಂತೆ ಒಕ್ಕಲಿಗ ಮತ್ತು ಇತರ ಸಮುದಾಯಗಳ ಬೇಡಿಕೆ ಬಗ್ಗೆ, ನಾವು ತೆರೆದ ಮನಸ್ಸು ಹೊಂದಿದ್ದೇವೆ. ನಮ್ಮ ಸಮುದಾಯದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಕರೆ ಮಾಡಿದ್ದರು. ಎಲ್ಲ ಸಮುದಾಯಗಳಿಗೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದಿದ್ದೇನೆ. ಸ್ವಾಮೀಜಿಯವರ ಜೊತೆ ವಿವರವಾಗಿ ಮಾತನಾಡಿದ ನಂತರ ನಿರ್ಧಾರ ಮಾಡುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.