ADVERTISEMENT

ನಿವಾಸಕ್ಕೆ ಭದ್ರತೆ ಪುನಃ ನಿಯೋಜಿಸಲು ಸರ್ಕಾರಕ್ಕೆ ಸೂಚಿಸಿ:ಸಭಾಪತಿಗೆ ಛಲವಾದಿ ಪತ್ರ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 8:32 IST
Last Updated 31 ಅಕ್ಟೋಬರ್ 2025, 8:32 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಬೆಂಗಳೂರು: ನನ್ನ ನಿವಾಸಕ್ಕೆ ನಿಯೋಜಿಸಿದ್ದ ಕಾವಲುಪಡೆಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ಹಾಗೂ ಕಾರಣವಿಲ್ಲದೆ ದಿಢೀರನೆ ವಾಪಸು ಕರೆಸಿಕೊಳ್ಳಲಾಗಿದೆ. ಈ ಕ್ರಮವು ರಾಜಕೀಯ ಪ್ರೇರಿತವಾಗಿ ನಡೆದಿರುವಂತೆ ತೋರುತ್ತಿದ್ದು, ಇದು ದ್ವೇಷದ ರಾಜಕಾರಣದ ಪ್ರತಿಫಲವೆಂದು ನನಗೆ ಅನಿಸುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ದೂರಿದ್ದಾರೆ.

ಈ ಸಂಬಂಧ ಸಭಾಪತಿಗೆ ಪತ್ರ ಬರೆದಿರುವ ಅವರು, ನನ್ನ ನಿವಾಸಕ್ಕೆ ಹಿಂದಿನಂತೆಯೇ ಭದ್ರತೆಯನ್ನು ತಕ್ಷಣವೇ ಪುನಃ ನಿಯೋಜಿಸಲು ಸರ್ಕಾರಕ್ಕೆ ಅಗತ್ಯ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ?

ನನ್ನ ನಿವಾಸಕ್ಕೆ ನಿಯೋಜಿಸಲಾಗಿದ್ದ ಭದ್ರತೆಯನ್ನು (ಗಾರ್ಡ್) ಯಾವುದೇ ಮುನ್ಸೂಚನೆ ಇಲ್ಲದೆ ವಾಪಸು ಪಡೆಯಲಾಗಿದೆ. ನಾನು ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನಾಗಿದ್ದು, ಕಳೆದ ಕೆಲವು ತಿಂಗಳಿಂದ ನನ್ನ ವಿರುದ್ಧ ರಾಜಕೀಯ ದ್ವೇಷದ ಸ್ವರೂಪದಲ್ಲಿ ನಡೆಯುತ್ತಿರುವ ಘಟನೆಗಳು ನನ್ನ ಹಾಗೂ ನನ್ನ ಕುಟುಂಬದ ಜೀವಭದ್ರತೆ ಬಗ್ಗೆ ಗಂಭೀರ ಆತಂಕವನ್ನು ಉಂಟುಮಾಡಿವೆ.

ADVERTISEMENT

ಇದಕ್ಕೆ ನಿದರ್ಶನವಾಗಿ. 21.05.2025 ರಂದು ಚಿತ್ತಾಪುರ ಸರ್ಕಾರಿ ಅತಿಥಿ ಗೃಹದಲ್ಲಿ ನನ್ನನ್ನು ಹೊರಬರದಂತೆ ಐದು ಗಂಟೆಗಳ ಕಾಲ ಗೃಹ ಬಂಧನದಲ್ಲಿಟ್ಟಂತಹ ಘಟನೆ ನಡೆದಿದೆ. ಈ ಕುರಿತು ನಾನು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಯಾವುದೇ ದೂರು ದಾಖಲಿಸಿಲ್ಲ ಮತ್ತು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಇದಕ್ಕೂ ಮೀರಿ, ಕಳೆದ ಕೆಲವು ದಿನಗಳಿಂದ ಅಪರಿಚಿತರಿಂದ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಹಾಗೂ ಬೆದರಿಕೆ ಹಾಕುವಂತಹ ಪೋಸ್ಟ್‌ಗಳು ಮರುಕಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ನಾನು ತೀವ್ರ ಆತಂಕಗೊಂಡಿದ್ದೇನೆ.

ಇಂತಹ ಪರಿಸ್ಥಿತಿಯಲ್ಲಿ ನನ್ನ ನಿವಾಸಕ್ಕೆ ನಿಯೋಜಿಸಿದ್ದ ಕಾವಲುಪಡೆಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ಹಾಗೂ ಯಾವುದೇ ಕಾರಣವಿಲ್ಲದೆ ದಿಢೀರನೆ ವಾಪಸು ಕರೆಸಿಕೊಳ್ಳಲಾಗಿದೆ. ಈ ಕ್ರಮವು ರಾಜಕೀಯ ಪ್ರೇರಿತವಾಗಿ ನಡೆದಿರುವಂತೆ ತೋರುತ್ತಿದ್ದು, ಇದು ದ್ವೇಷದ ರಾಜಕಾರಣದ ಪ್ರತಿಫಲವೆಂದು ನನಗೆ ಅನಿಸುತ್ತಿದೆ.

ಇತ್ತೀಚಿಗೆ ಶಿವರಾಜ ಮುತ್ತಣ್ಣನವರ್ ಎಂಬವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ 'ಕುರುಬರಿಗೆ ಎಸ್.ಟಿ. ಮೀಸಲಾತಿ ನೀಡುವುದನ್ನು ವಿರೋಧಿಸಿದರೆ ಛಲವಾದಿ ನಾರಾಯಣಸ್ವಾಮಿಯನ್ನು ಜೀವಂತ ಸುಟ್ಟು ಹಾಕುತ್ತೇನೆ'ಎಂದು ಭಯಾನಕವಾಗಿ ಬರೆದು ಸಾರ್ವಜನಿಕವಾಗಿ ಪೋಸ್ಟ್ ಮಾಡಿದ್ದಾರೆ. ಈ ಹೇಳಿಕೆಗಳು ನನ್ನ ಜೀವಕ್ಕೆ ನೇರ ಬೆದರಿಕೆಯಾಗಿದೆ ಮತ್ತು ಕಾನೂನು ಕ್ರಮಕ್ಕೆ ಒಳಪಟ್ಟಂತಹವುಗಳಾಗಿವೆ.

ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಏಕಾಏಕಿ ನನ್ನ ನಿವಾಸಕ್ಕೆ ಒದಗಿಸಿದ್ದ ಭದ್ರತೆಯನ್ನು ಹಿಂಪಡೆದಿರುವುದು ಅಸಮಂಜಸ ಹಾಗೂ ಅನ್ಯಾಯಕರವಾಗಿದೆ. ಇಂತಹ ಕ್ರಮಗಳು ನನ್ನ ವಿರುದ್ಧ ಷಡ್ಯಂತ್ರ ಮತ್ತು ದ್ವೇಷದ ರಾಜಕಾರಣ ನಡೆಯುತ್ತಿರುವ ಅನುಮಾನವನ್ನು ಬಲಪಡಿಸುತ್ತಿವೆ ಎಂದು ಆಪಾದಿಸಿದ್ದಾರೆ.

ವಿರೋಧ ಪಕ್ಷದ ನಾಯಕನಾಗಿ ನನ್ನ ಸುರಕ್ಷತೆ ಸರ್ಕಾರದ ನೈತಿಕ ಹಾಗೂ ಕಾನೂನುಬದ್ಧ ಜವಾಬ್ದಾರಿಯಾಗಿದೆ.ಆದ್ದರಿಂದ

1. ನನ್ನ ನಿವಾಸಕ್ಕೆ ಹಿಂದಿನಂತೆಯೇ ಭದ್ರತೆಯನ್ನು ತಕ್ಷಣವೇ ಪುನಃ ನಿಯೋಜಿಸಲು,

2. ನನ್ನ ಜೀವಕ್ಕೆ ಬೆದರಿಕೆ ನೀಡಿದ ಶಿವರಾಜ ಮುತ್ತಣ್ಣನವರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು.

3. ಮುಂದಿನ ದಿನಗಳಲ್ಲಿ ನನ್ನ ಹಾಗೂ ನನ್ನ ಕುಟುಂಬದ ಜೀವ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ತಾವು ಸರ್ಕಾರದ ಗಮನಕ್ಕೆ ತರಬೇಕೆಂದು ಹಾಗೂ ಅಗತ್ಯ ಸೂಚನೆ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಒಂದು ವೇಳೆ ಭದ್ರತೆ ಒದಗಿಸುವಲ್ಲಿ ವಿಫಲವಾದರೆ, ನನ್ನ ಅಥವಾ ನನ್ನ ಕುಟುಂಬದ ಜೀವಕ್ಕೆ ಏನಾದರೂ ಅಪಾಯ ಉಂಟಾದರೆ, ಕರ್ನಾಟಕ ಸರ್ಕಾರವೇ ಪೂರ್ಣ ಜವಾಬ್ದಾರಿಯಾಗಿರುತ್ತದೆ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.