ಚಿಂಚೋಳಿ (ಕಲಬುರ್ಗಿ ಜಿಲ್ಲೆ): ‘ಪ್ರಜಾವಾಣಿ’ಯ ‘ಲೈಫ್ಡೌನ್ ಕಥೆಗಳು’ಸರಣಿಯಲ್ಲಿ ಪ್ರಕಟಗೊಂಡ ತಾಲ್ಲೂಕಿನ ಶೇರಿಭಿಕನಳ್ಳಿ ತಾಂಡಾಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮಂಗಳವಾರ ದೌಡಾಯಿಸಿ ಮಾಹಿತಿ ಸಂಗ್ರಹಿಸಿದರು.
‘ಕಾಡು ಕೂಸುಗಳ ಕೂಗು’ ವರದಿಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಸೂಚನೆಯ ಮೇರೆಗೆ ತಾಂಡಾಗೆ ಬಂದ ಅಧಿಕಾರಿಗಳು, ನಿವಾಸಿಗಳಿಂದ ಮಾಹಿತಿ ಕಲೆಹಾಕಿದರು.
ಸರ್ಕಾರಿ ಶಾಲೆ, ಅಂಗನವಾಡಿ,ಕೃಷಿ ಜಮೀನು, ಕುಡಿಯುವ ನೀರಿನ ತೊಂದರೆ, ಕಟ್ಟಿಗೆಯಿಂದ ಕಟ್ಟಿಕೊಂಡ ಸ್ನಾನಗೃಹಗಳನ್ನು ವೀಕ್ಷಿಸಿದರು. ‘ಸ್ಥಳಾಂತರಕ್ಕೆ ಸಾಕಷ್ಟು ಬಾರಿ ಬೇಡಿಕೊಂಡರೂ ಕೇಳೋರಿಲ್ಲ. ಅರಣ್ಯ ಇಲಾಖೆಯಿಂದಲೇ ಸಾಕಷ್ಟು ತೊಂದರೆ ಆಗುತ್ತಿದೆ. ನಮ್ಮ ಬದುಕಂತೂ ದಾರುಣವಾಗೇ ಮುಗಿಯಿತು. ಮಕ್ಕಳಾದರೂ ಒಳ್ಳೆಯಜೀವನ ನಡೆಸಬೇಕು. ಅಗತ್ಯ ಸೌಕರ್ಯ ನೀಡಿ; ಇಲ್ಲವೇ ಸ್ಥಳಾಂತರಿಸಿ’ ಎಂದು ನಿವಾಸಿಗಳಾದ ಮನ್ನು ಚಿನ್ನಾ ರಾಠೋಡ, ವಿಠಲ ಬಾಣ್ಣೋತ್ ಅವರು ಕೇಳಿಕೊಂಡರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಲಿಂಗ ವಾಲಿ, ಪ್ರಥಮ ದರ್ಜೆ ಸಹಾಯಕ ಸಾಯಿರೆಡ್ಡಿ ನಾಯನೂರ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ಅಧಿಕಾರಿ ವಸಂತ ಪವಾರ, ಎಂಜಿನಿಯರ್ ಅನಿಲಕುಮಾರ ರಾಠೋಡ, ಶಿಕ್ಷಕ ಕಾಶಿನಾಥ, ಅಂಗನವಾಡಿ ಕಾರ್ಯಕರ್ತೆ ರೇಣುಕಾ, ನಿಗಮದ ಸಿಬ್ಬಂದಿ ವೈಶಾಲಿ ತಂಡದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.