
ಬೆಂಗಳೂರು: ಬೇಡ್ತಿ–ವರದಾ ನದಿ ತಿರುವು, ಅಘನಾಶಿನಿ–ವೇದಾವತಿ ನದಿ ತಿರುವು ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಕೈಬಿಡಬೇಕು ಎಂದು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಶಿವರಾಂ ಹೆಬ್ಬಾರ, ಭೀಮಣ್ಣ ನಾಯಕ, ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ ಅವರಿದ್ದ ನಿಯೋಗವು ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿ ಮಾಡಿ ಮನವಿ ಪತ್ರ ನೀಡಿದೆ.
‘ಈ ಎಲ್ಲ ಯೋಜನೆಗಳು ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆಯುತ್ತಿವೆ. ಜಿಲ್ಲೆಯು ಈಗಾಗಲೇ ಇಂತಹ ಹಲವು ಬೃಹತ್ ಯೋಜನೆಗಳಿಂದ ನಲುಗಿ ಹೋಗಿದೆ. ಪ್ರಸ್ತಾವಿತ ಈ ಯೋಜನೆಗಳಿಂದ ಇಲ್ಲಿನ ಪರಿಸರಕ್ಕೆ ಮಾರಕವಾಗಲಿದೆ’ ಎಂದು ನಿಯೋಗವು ಕಳವಳ ವ್ಯಕ್ತಪಡಿಸಿದೆ.
‘ಈ ನಾಲ್ಕೂ ನದಿಗಳು ಪಶ್ಚಿಮ ಘಟ್ಟದ ಪ್ರಮುಖ ಜಲಮೂಲಗಳಾಗಿವೆ. ಈ ಯೋಜನೆಗಳಿಂದ ನದಿಪಾತ್ರಕ್ಕೆ, ಅವುಗಳ ಸಹಜ ಸ್ಥಿತಿಗೆ ಧಕ್ಕೆಯಾಗಲಿದೆ. ಪರಿಣಾಮವಾಗಿ ಜಿಲ್ಲೆಯ ಜನರಿಗೆ ನೀರು ಲಭ್ಯವಿಲ್ದೇ ಇರುವ ಸ್ಥಿತಿ ನಿರ್ಮಾಣವಾಗಲಿದೆ ಮತ್ತು ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರಕ್ಕೂ ಹಾನಿಯಾಗಲಿದೆ. ಹೀಗಾಗಿ ಈ ಯೋಜನೆಗಳನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.