ADVERTISEMENT

ರಸ್ತೆ ಅಪಘಾತ: ತಲೆ ಗಾಯ ಪ್ರಕರಣ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 20:24 IST
Last Updated 19 ಮಾರ್ಚ್ 2023, 20:24 IST
   

ಬೆಂಗಳೂರು: ‘ರಸ್ತೆ ಅಪಘಾತಗಳಿಂದ ಸಂಭವಿಸುತ್ತಿರುವ ತಲೆ ಗಾಯ ಪ್ರಕರಣಗಳು ಹೆಚ್ಚಳವಾಗುತ್ತಿವೆ. 2021ರಲ್ಲಿ ದೇಶದಲ್ಲಿ 1.5 ಲಕ್ಷ ಜನರು ರಸ್ತೆ ಅಪಘಾತದಿಂದ ಮೃತಪಟ್ಟರೆ, ಅವರಲ್ಲಿ 36,647 ಮಂದಿ ಕರ್ನಾಟಕದವರಾಗಿದ್ದಾರೆ’ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ತಿಳಿಸಿದೆ.

ವಿಶ್ವ ತಲೆ ಗಾಯದ ಜಾಗೃತಿ ದಿನದ ಪ್ರಯುಕ್ತ ಸಂಸ್ಥೆಯು ನಗರದಲ್ಲಿ ಸೋಮವಾರ ಜಾಗೃತಿ ದಿನವನ್ನು ಹಮ್ಮಿಕೊಂಡಿದೆ. ‘ರಸ್ತೆ ಅಪಘಾತದಲ್ಲಿ ಗಾಯಗೊಳ್ಳುವವರ ಸಂಖ್ಯೆ ಮೃತರ 30 ಪಟ್ಟು ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಗಾಯಗೊಳ್ಳುವವರಲ್ಲಿ ಹೆಚ್ಚಿನವರು ದ್ವಿಚಕ್ರವಾಹನ ಸವಾರರಾಗಿದ್ದಾರೆ. ಬೆಂಗಳೂರಿನಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಸೀಟ್ ಬೆಲ್ಟ್ ಹಾಕದಿರುವುದು, ಅತಿಯಾದ ವೇಗದಲ್ಲಿ ಚಾಲನೆ, ವಾಹನ ಚಲಾಯಿಸುವಾಗ ಮೊಬೈಲ್ ಫೋನ್‌ ಬಳಕೆ, ಗುಣಮಟ್ಟದ ಹೆಲ್ಮೆಟ್ ಧರಿಸದೆ ಇರುವುದು, ಸರಿಯಾದ ರೀತಿಯಲ್ಲಿ ಹೆಲ್ಮೆಟ್ ಹಾಕಿಕೊಳ್ಳದೆ ಇರುವುದು ಸೇರಿ ವಿವಿಧ ಕಾರಣಗಳಿಂದ ರಸ್ತೆ ಅಪಘಾತಗಳು ಹೆಚ್ಚಳವಾಗುತ್ತಿವೆ’ ಎಂದು ಹೇಳಿದೆ. ‌

‘ರಸ್ತೆ ಅಪಘಾತದಿಂದ ಸಂಭವಿಸುತ್ತಿರುವ ಗಾಯಗಳು ಮಿದುಳಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಹೆಚ್ಚಿನ ಗಾಯಗಳು ಮಿದುಳಿನ ಊತಕ್ಕೆ ಕಾರಣವಾಗುತ್ತವೆ. ರಕ್ತಸ್ರಾವದಿಂದ ಮೃತಪಡುವ ಸಾಧ್ಯತೆಯೂ ಇರುತ್ತದೆ. ವರದಿಯಾಗುತ್ತಿರುವ ತಲೆ ಗಾಯ ಪ್ರಕಾರಣಗಳಲ್ಲಿ ಶೇ 70 ರಷ್ಟು ಪ್ರಕರಣಗಳು ರಸ್ತೆ ಅಪಘಾತಕ್ಕೆ ಸಂಭವಿಸಿದ್ದಾಗಿದೆ’ ಎಂದು ಸಂಸ್ಥೆ
ತಿಳಿಸಿದೆ.

ADVERTISEMENT

‘ರಸ್ತೆ ಅಪಘಾತದಿಂದ ಗಾಯಗೊಂಡವರಲ್ಲಿ ಶೇ 25ರಿಂದ ಶೇ 30ರಷ್ಟು ಮಂದಿ ದೀರ್ಘಾವಧಿ ಅಂಗವಿಕಲತೆ ಹೊಂದುವ ಸಾಧ್ಯತೆ ಇರುತ್ತದೆ. ದೈಹಿಕ ಗಾಯಗಳು ಸಾಮಾಜಿಕ ಹಾಗೂ ಆರ್ಥಿಕ ಹೊರೆಯೂ ಆಗುತ್ತದೆ. ಆದ್ದರಿಂದ ತಲೆ ಗಾಯ ಚಿಕಿತ್ಸೆಗೆ ಆದ್ಯತೆ ನೀಡಬೇಕು. ಮಿದುಳಿನ ಗಾಯಗಳನ್ನು ಕಡಿಮೆ ಮಾಡಲು ಸುರಕ್ಷಿತ ರಸ್ತೆ ನಿರ್ಮಾಣ, ರಸ್ತೆ ಸುರಕ್ಷತಾ ನಿಯಮಗಳ ಪಾಲನೆಗೆ ಆದ್ಯತೆ ನೀಡಬೇಕು’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.