ADVERTISEMENT

ಪೆಟ್ರೋಲ್ ತೆರಿಗೆಯ ರೂಪದಲ್ಲಿ ಜನರ ಜೇಬಿನಿಂದ ಹಣವನ್ನು ದೋಚುವ ಹುನ್ನಾರ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 7:31 IST
Last Updated 10 ಜೂನ್ 2021, 7:31 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್   

ಬೆಂಗಳೂರು: ಇಂಧನ ಬೆಲೆ ₹100ಕ್ಕೆ ಏರಿರುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಿಡಿ ಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪೆಟ್ರೋಲ್ ತೆರಿಗೆಯ ರೂಪದಲ್ಲಿ ಜನರ ಜೇಬಿನಿಂದ ಹಣವನ್ನು ದೋಚುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಶಿವಕುಮಾರ್, 'ದೇಶದ ಜನಸಾಮಾನ್ಯರನ್ನು ಮತ್ತಷ್ಟು ಬಡವರನ್ನಾಗಿಸಲು ಬಿಜೆಪಿ ಹೊರಟಿದೆ. ಕೋವಿಡ್ ನಿರ್ವಹಣೆಯಲ್ಲಿನ‌ ವೈಫಲ್ಯವೂ ಸಾಲದು ಎಂಬಂತೆ, ಪೆಟ್ರೋಲ್ ತೆರಿಗೆಯ ರೂಪದಲ್ಲಿ ಜನರ ಜೇಬಿನಿಂದ ಹಣವನ್ನು ದೋಚುವ ಹುನ್ನಾರ ನಡೆಸಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

ಪೆಟ್ರೋಲ್ ಬೆಲೆ ₹35, ಬಿಜೆಪಿ ತೆರಿಗೆ ₹65, ನೀವು ಪಾವತಿಸುವ ಬೆಲೆ ₹100 ಎಂದು ಉಲ್ಲೇಖಿಸಿದ್ದಾರೆ.

'ಪೆಟ್ರೋಲ್ ದರ ಏರಿಕೆ ಖಂಡಿಸಿ ರಾಜ್ಯದಲ್ಲಿ ಐದು ದಿನ 5 ಸಾವಿರ ಪೆಟ್ರೋಲ್ ಬಂಕ್‌ಗಳಲ್ಲಿ '100 ನಾಟೌಟ್' ಅಭಿಯಾನ ಆರಂಭಿಸುತ್ತಿದ್ದೇವೆ' ಎಂದು ಡಿ.ಕೆ. ಶಿವಕುಮಾರ್ ಬುಧವಾರ ಹೇಳಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ಮೂಲಕ ಜನರ ಜೇಬು ಲೂಟಿ ಮಾಡುತ್ತಿದೆ. ಇದನ್ನು ಪ್ರತಿಭಟಿಸಿ ಇದೇ 11ರಿಂದ 15ರವರೆಗೆ ಅಭಿಯಾನ ಹಮ್ಮಿಕೊಳ್ಳುತ್ತೇವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.