ಬೆಂಗಳೂರು: ಕರ್ನಾಟಕ ವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮ ರಚಿಸಿ ಆದೇಶ ಹೊರಡಿಸಿರುವ ಸರ್ಕಾರ, ನಿಗಮಕ್ಕೆ ₹500 ಕೋಟಿ ಒದಗಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಯಾವುದೇ ಜಾತಿ ಸಂಬಂಧಿತ ನಿಗಮಕ್ಕೆ ಇಷ್ಟೊಂದು ದೊಡ್ಡ ಮೊತ್ತದ ಅನುದಾನ ಒದಗಿಸಿರಲಿಲ್ಲ. ಈ ವಿಷಯ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ಎಲ್ಲ ಜಾತಿಗಳ ನಾಯಕರು ತಮ್ಮ ಜಾತಿಗೊಂದು ನಿಗಮ ಸ್ಥಾಪಿಸುವಂತೆ ಒತ್ತಡ ಹೇರುವುದರ ಜತೆಗೇ, ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾರಂಭಿಸಿದ್ದಾರೆ.
ಈ ನಿಗಮ ಸ್ಥಾಪನೆಯ ಹಿಂದೆ ಬೇರೆಯದೇ ಉದ್ದೇಶವಿದ್ದು, ಒಂದು ವೇಳೆ ಯಡಿಯೂರಪ್ಪ ನಾಯಕತ್ವ ಸಂಕಷ್ಟಕ್ಕೆ ಸಿಲುಕಿದರೆ ಸಮುದಾಯ ತಮ್ಮ ನೆರವಿಗೆ ನಿಲ್ಲುವಂತೆ ನೋಡಿಕೊಳ್ಳಬೇಕೆಂಬ ದೂರಗಾಮಿ ಆಲೋಚನೆಯೂ ಇದ್ದಂತಿದೆ. ನಿಗಮ ಸ್ಥಾಪಿಸುವುದಾಗಿ ಏಕಾಏಕಿ ಘೋಷಿಸುವ ಜತೆಗೆ, ಆದೇಶ ಹೊರಡಿಸುವ ತರಾತುರಿಯ ಹಿಂದೆ ರಾಜಕೀಯ ಲೆಕ್ಕಾಚಾರ ಕೆಲಸ ಮಾಡಿದೆ ಎಂದೂ ಹೇಳಲಾಗುತ್ತಿದೆ.
‘ವೀರಶೈವ–ಲಿಂಗಾಯತ ಸಮುದಾಯ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಲಾಗುತ್ತಿದೆ’ ಎಂದು ನಿಗಮ ರಚಿಸಿ ಹೊರಡಿಸಿರುವ ಆದೇಶದಲ್ಲಿ ಹೇಳಲಾಗಿದೆ.
ಈ ನಿಗಮದ ಸ್ಥಾಪನೆಗೆ ತಗಲುವ ಆರಂಭಿಕ ವೆಚ್ಚವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಭರಿಸಿ ನಂತರ ಕರ್ನಾಟಕ ವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮದಿಂದ ಭರ್ತಿ ಮಾಡಲಾಗುವುದು ಎಂದು ಆದೇಶ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.