ADVERTISEMENT

ಕುಮಾರಸ್ವಾಮಿಗೆ ತಾಕತ್ತಿದ್ದರೆ ಆರ್‌ಎಸ್‌ಎಸ್‌ ನಿಷೇಧಿಸಬೇಕಿತ್ತು: ಪ್ರಭಾಕರ್ ಭಟ್

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 10:17 IST
Last Updated 28 ಜನವರಿ 2020, 10:17 IST
ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಎಚ್.ಡಿ.ಕುಮಾರಸ್ವಾಮಿ
ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಎಚ್.ಡಿ.ಕುಮಾರಸ್ವಾಮಿ   

ಚಿತ್ರದುರ್ಗ: ಮುಖ್ಯಮಂತ್ರಿ ಆಗಿದ್ದವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನಿಷೇಧ ಮಾಡುವಂತೆ ಮಾತನಾಡುವ ಬದಲು ಅಧಿಕಾರದಲ್ಲಿದ್ದಾಗ ನಿಷೇಧ ಹೇರಿ ತಾಕತ್ತು ತೋರಿಸಬೇಕಿತ್ತು ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಎಚ್.ಡಿ.ಕುಮಾರಸ್ವಾಮಿಗೆ ಸವಾಲು ಹಾಕಿದರು.

ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

ಆರ್‌ಎಸ್‌ಎಸ್ ಹಾಗೂ ಬಜರಂಗದಳ ಶಿಸ್ತು, ದೇಶಭಕ್ತಿ ಬೆಳೆಸುವ ಸಂಘಟನೆ. ಗೋಮಾತೆ ಮತ್ತು ಮಹಿಳೆಯರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಯಾರನ್ನೋ ಹೊಡೆಯುವ, ಬಡಿಯುವ ಸಂಸ್ಕೃತಿ ನಮ್ಮದಲ್ಲ. ಆದರೂ, ಆರ್‌ಎಸ್‌ಎಸ್ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ADVERTISEMENT

ಹಿಂದೂ ಸಮಾಜದ ರಕ್ಷಣೆ ಆರ್‌ಎಸ್‌ಎಸ್‌ ಕರ್ತವ್ಯ. ಹಿಂದೂ ಸಮಾಜವೇ ನಮ್ಮ ಹಿಂದೆ ಬರುತ್ತಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮಹಾತ್ಮ ಗಾಂಧೀಜಿ ಕೊಲೆ ಪ್ರಕರಣ ಮುಂದಿಟ್ಟುಕೊಂಡು ಸಂಘಟನೆ ನಿಷೇಧ ಮಾಡಲಾಗಿತ್ತು. ಆದರೆ, ಅಷ್ಟೇ ಶೀಘ್ರವಾಗಿ ನಿಷೇಧ ತೆಗೆದು ಹಾಕಲಾಯಿತು ಎಂದರು.

ಕ್ರೈಸ್ತರು, ಮುಸ್ಲಿಮರು ಪಾಶ್ಚಾತ್ಯ ದೃಷ್ಠಿಕೋನ ಹೊಂದಿದ್ದಾರೆ. ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ಹಾರಿಸಿಕೊಂಡು ಹೋಗುತ್ತಿದ್ದಾರೆ. ಗೋವುಗಳ ಮಾರಣಹೋಮ ಮಾಡಲಾಗುತ್ತಿದೆ. ಇದನ್ನು ತಡೆಯುವುದು ಹಾಗೂ ಹಿಂದೂ ಸಮಾಜ ರಕ್ಷಣೆ ನಮ್ಮ ಆದ್ಯತೆ ಎಂದು ಹೇಳಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಹೊರ ದೇಶದಿಂದ ಹಣ ಬರುತ್ತಿದೆ. ಸಿಮಿ ಸಂಘಟನೆಯಿಂದ ಇದು ಹಣ ಪಡೆಯುತ್ತಿದೆ. ಈ ಹಣ ಬಳಸಿಕೊಂಡು ದೇಶದಲ್ಲಿ ದೊಂಬಿ ಸೃಷ್ಟಿಸಲಾಗುತ್ತಿದೆ. ಇದನ್ನು ಮಟ್ಟ ಹಾಕಲು ಪ್ರಧಾನಿ ಮೋದಿ ದಿಟ್ಟ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.