ADVERTISEMENT

ಬೀಗರ ಗೆಲುವಿಗೆ ‘ಸಾಹುಕಾರ್‌’ ಶ್ರಮ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಮೇ 2019, 19:30 IST
Last Updated 26 ಮೇ 2019, 19:30 IST
 ರಮೇಶ ಜಾರಕಿಹೊಳಿ ಹಾಗೂ ವೈ. ದೇವೇಂದ್ರಪ್ಪ
ರಮೇಶ ಜಾರಕಿಹೊಳಿ ಹಾಗೂ ವೈ. ದೇವೇಂದ್ರಪ್ಪ   

ಹೊಸಪೇಟೆ: ಬಳ್ಳಾರಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವೈ. ದೇವೇಂದ್ರಪ್ಪನವರ ಗೆಲುವಿನಲ್ಲಿ ಅವರ ಬೀಗರು, ಗೋಕಾಕಿನ ‘ಸಾಹುಕಾರ್‌’ ರಮೇಶ ಜಾರಕಿಹೊಳಿ ಅವರ ಶ್ರಮವೂ ಅಡಗಿದೆ.

ಬಿಜೆಪಿ ಟಿಕೆಟ್‌ ದೇವೇಂದ್ರಪ್ಪನವರಿಗೆ ಸಿಗುವಂತೆ ನೋಡಿಕೊಂಡಿರುವುದು, ಪ್ರಚಾರದ ರಣತಂತ್ರ ರೂಪಿಸಿರುವುದು ಹಾಗೂ ಚುನಾವಣೆಯಲ್ಲಿ ಜಯಶಾಲಿ ಆಗುವಂತೆ ನೋಡಿಕೊಳ್ಳುವಲ್ಲಿ ರಮೇಶ ಜಾರಕಿಹೊಳಿ ಅವರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

ಕಾಂಗ್ರೆಸ್‌ ವರಿಷ್ಠರ ವಿರುದ್ಧ ಅಸಮಾಧಾನಗೊಂಡು ಆ ಪಕ್ಷದ ವಿರುದ್ಧ ಬಹಿರಂಗವಾಗಿಯೇ ತೊಡೆ ತಟ್ಟಿದ್ದ ಜಾರಕಿಹೊಳಿ ಅವರು ನಂತರದ ದಿನಗಳಲ್ಲಿ ಬಿಜೆಪಿಗೆ ಹತ್ತಿರವಾದರು. ಒಂದು ಹಂತದಲ್ಲಿ ‘ಆಪರೇಷನ್‌ ಕಮಲ'ಕ್ಕೂ ಮುಂದಾಗಿದ್ದರು. ಆದರೆ, ಅದು ಕೈಗೂಡಿರಲಿಲ್ಲ.

ADVERTISEMENT

ಬಳಿಕ ಅವರು, ತಾವು ಹೇಳಿದ ವ್ಯಕ್ತಿಗೆ ಬಳ್ಳಾರಿಯಿಂದ ಕಣಕ್ಕಿಳಿಸಿದರೆ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ತರುವುದಾಗಿ ಭರವಸೆ ನೀಡಿದ್ದರು. ಉಪಚುನಾವಣೆಯಲ್ಲಿ ಭಾರಿ ಅಂತರದಿಂದ ಜಯಶಾಲಿಯಾಗಿದ್ದ ವಿ.ಎಸ್‌.ಉಗ್ರಪ್ಪನವರನ್ನು ಮಣಿಸಲು ಸೂಕ್ತ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ನಡೆಸಿತ್ತು. ಉಗ್ರಪ್ಪನವರನ್ನು ಮಣಿಸಬೇಕಾದರೆ ಜಾರಕಿಹೊಳಿ ಅವರು ಹೇಳಿದ ವ್ಯಕ್ತಿಗೆ ಟಿಕೆಟ್‌ ಕೊಡುವುದು ಸೂಕ್ತ ಎಂದು ಭಾವಿಸಿ, ಅಂತಿಮವಾಗಿ ದೇವೇಂದ್ರಪ್ಪನವರಿಗೆ ಬಿಜೆಪಿ ಟಿಕೆಟ್‌ ನೀಡಿತು. ರಮೇಶ ಜಾರಕಿಹೊಳಿ ಅವರು ಮಾತು ಕೊಟ್ಟಂತೆ ದೇವೇಂದ್ರಪ್ಪನವರು ಗೆಲ್ಲುವಂತೆ ನೋಡಿಕೊಂಡರು.

ದೇವೇಂದ್ರಪ್ಪನವರಿಗೆ ಟಿಕೆಟ್‌ ಘೋಷಣೆಯಾದ ಬಳಿಕ ರಮೇಶ ಜಾರಕಿಹೊಳಿ ಅವರು ಜಿಲ್ಲೆಗೆ ಹಲವು ಸಲ ಭೇಟಿ ನೀಡಿದರು. ನಾಯಕ ಸಮಾಜದ ಮುಖಂಡರೊಂದಿಗೆ ಸಭೆಗಳನ್ನು ನಡೆಸಿ, ವಿಶ್ವಾಸಕ್ಕೆ ತೆಗೆದುಕೊಂಡರು. ಚುನಾವಣೆ ಹೊಸ್ತಿಲಿನಲ್ಲಿ ಆ ಸಮಾಜದ ಅನೇಕ ಮುಖಂಡರು ಬಿಜೆಪಿ ಸೇರಿದರು. ಇದರಿಂದ ಸಹಜವಾಗಿಯೇ ಬಿಜೆಪಿ ಶಕ್ತಿ ಇಮ್ಮಡಿಯಾಯಿತು. ಮತದಾನದ ಕೊನೆಯ ದಿನದ ವರೆಗೆ ಕ್ಷೇತ್ರದಲ್ಲಿನ ಪ್ರತಿಯೊಂದು ಚಟುವಟಿಕೆಗಳ ಕುರಿತು ಜಾರಕಿಹೊಳಿ ಮಾಹಿತಿ ಪಡೆದುಕೊಂಡು, ಅದಕ್ಕೆ ಪೂರಕವಾಗಿ ಕಾರ್ಯತಂತ್ರ ರೂಪಿಸುತ್ತಿದ್ದರು.

ಅಗತ್ಯ ಸಂಪನ್ಮೂಲ ಕೂಡ ಪೂರೈಸಿದ ರಮೇಶ ಜಾರಕಿಹೊಳಿ ಅವರು, ಗೋಕಾಕಿನಿಂದ ಕಾರ್ಯಕರ್ತರ ಪಡೆಯನ್ನು ಜಿಲ್ಲೆಗೆ ಕಳುಹಿಸಿಕೊಟ್ಟಿದ್ದರು. ಜಿಲ್ಲೆಯ ಪೂರ್ವ ತಾಲ್ಲೂಕುಗಳಲ್ಲಿ ಪ್ರಚಾರದ ಜವಾಬ್ದಾರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಬಿಜೆಪಿ ಕಾರ್ಯಕರ್ತರು ವಹಿಸಿಕೊಂಡರು.

ಜಿಲ್ಲೆಯ ಪಶ್ಚಿಮದ ತಾಲ್ಲೂಕುಗಳಾದ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಹಾಗೂ ಹೂವಿನಹಡಗಲಿಯಲ್ಲಿ ಜಾರಕಿಹೊಳಿ ಅವರ ಬೆಂಬಲಿಗರು, ದೇವೇಂದ್ರಪ್ಪನವರ ಪರ ಸುಡುವ ಬಿಸಿಲನ್ನೂ ಲೆಕ್ಕಿಸದೆ ಪ್ರಚಾರ ನಡೆಸಿದರು. ಅದರ ಫಲವಾಗಿ ಈ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚಿನ ಮತ ಪಡೆಯಲು ಸಾಧ್ಯವಾಗಿದೆ. ಅದರಲ್ಲೂ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಪ್ರತಿನಿಧಿಸುವ ಹೂವಿನಹಡಗಲಿ ಕ್ಷೇತ್ರದಲ್ಲಿ ಬಿಜೆಪಿಗೆ ಭಾರಿ ಲೀಡ್‌ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.